ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಬಳಿ ಸಂಭವಿಸಿದ್ದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಿಶೇಷ ಕಾರ್ಯಪಡೆಯ (ಎಸ್ಟಿಎಫ್) ಇನ್ಸ್ಪೆಕ್ಟರ್ ಟಿ.ಡಿ.ರಾಜು ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾಗರ್ ಆಸ್ಪತ್ರೆಯಲ್ಲಿ ಸೋಮವಾರ ಅಸುನೀಗಿದ್ದಾರೆ.
ಕನಕಪುರ ರಸ್ತೆಯ ನಾರಾಯಣ ನಗರದಲ್ಲಿ ವಾಸವಿದ್ದ ರಾಜು, ಫೆ. 25ರಂದು ಬೆಳಿಗ್ಗೆ ಟಿ.ವಿ. ಕ್ಲಬ್ಗೆ ಸ್ಕೂಟರ್ನಲ್ಲಿ ಹೋಗಿದ್ದರು. ಅಲ್ಲಿಂದ ವಾಪಸ್ ಮನೆಗೆ ಬರುತ್ತಿದ್ದ ವೇಳೆ ಅವರ ಸ್ಕೂಟರ್ಗೆ ಶಾಲಾ ವಾಹನವೊಂದು ಡಿಕ್ಕಿ ಹೊಡೆದಿತ್ತು.
ಅಪಘಾತದಿಂದಾಗಿ ಗಾಯಗೊಂಡು ರಸ್ತೆಯಲ್ಲಿ ನರಳಾಡುತ್ತ ಬಿದ್ದಿದ್ದ ರಾಜು ಅವರನ್ನು ಸಾಗರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ವಾಸಕೋಶಕ್ಕೆ ಪೆಟ್ಟು ಬಿದ್ದಿದ್ದರಿಂದಾಗಿ ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.