ರಾಮನಗರ/ಕನಕಪುರ: ಜಲ್ಲಿಕಟ್ಟು ಸ್ಪರ್ಧೆ ಆಯೋಜನೆ ಸಂಬಂಧ ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಹೋಬಳಿಯ ಗೊಲ್ಲರದೊಡ್ಡಿ ಬಳಿ ತಮಿಳರು ಹಾಗೂ ಪೊಲೀಸರ ನಡುವೆ ಭಾನುವಾರ ಸಂಜೆ ಗಲಾಟೆ ನಡೆದಿದ್ದು, ಪೊಲೀಸರು ಅಶ್ರುವಾಯು ಶೆಲ್ ಪ್ರಯೋಗಿಸಿ ಗುಂಪು ಚದುರಿಸಿದರು.
ಕರ್ನಾಟಕ - ತಮಿಳುನಾಡು ಗಡಿಯಲ್ಲಿರುವ ಹುಣಸನಹಳ್ಳಿ ಸಮೀಪ ಜಲ್ಲಿಕಟ್ಟು ಕ್ರೀಡೆ ಆಯೋಜನೆಗೆ ತಮಿಳುನಾಡಿನ ಗುಂಪೊಂದು ಮುಂದಾಯಿತು. ಇದಕ್ಕೆ ಪೊಲೀಸರು ತಡೆ ಒಡ್ಡಿದರು. ಇದರಿಂದ ಕೆರಳಿದ ಗುಂಪು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿತು. ಎಎಸ್ಐ ಗಣೇಶ್ ಕಲ್ಲು ತೂರಾಟದಿಂದ ಗಾಯಗೊಂಡರು.
ಪ್ರಕರಣ ಸಂಬಂಧ ಕೋಡಿಹಳ್ಳಿ ಠಾಣೆ ಪೊಲೀಸರು ಮೂವರನ್ನು ವಶಕ್ಕೆ ಪಡೆದರು. ಸ್ಥಳಕ್ಕೆ ಡಿವೈಎಸ್ಪಿ ಮಲ್ಲೇಶ್, ಕನಕಪುರ ಸಿಪಿಐ ಮಲ್ಲೇಶ್ ಸಹಿತ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದರು. ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ.