ಬೆಂಗಳೂರು: ‘ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ 370ನೇ ವಿಧಿ ರದ್ದು ಮಾಡಿರುವುದು ಅಪಾಯಕಾರಿ ಬೆಳವಣಿಗೆ. ದೇಶವನ್ನು ಕೇಂದ್ರೀಕರಣದತ್ತ ಒಯ್ಯಲಾಗುತ್ತಿದೆ. ಇದು ಒಳ್ಳೆಯದಲ್ಲ' ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಜನಕ್ರಾಂತಿ ವೇದಿಕೆಯ ವತಿಯಿಂದ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ಆಗಸ್ಟ್ ಕ್ರಾಂತಿ ಕುರಿತಾದ ಚಿತ್ರಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
‘ಗಾಂಧೀಜಿ ಶ್ರೀರಾಮನ ಭಕ್ತರಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಅವರು ದೇವರು, ಧರ್ಮವನ್ನು ತರಲಿಲ್ಲ. ಆದರೆ, ಇಂದು ರಾಷ್ಟ್ರೀಯತೆ ಮತ್ತು ಧರ್ಮದಂತಹ ವಿಷಯಗಳ ಮೂಲಕ ಯುವಸಮೂಹವನ್ನು ಮರಳು ಮಾಡಲಾಗುತ್ತಿದೆ’ ಎಂದರು.
‘ಹಲವು ಮಂದಿ ಬದಲಾದ ಗಾಂಧಿ ಬಗ್ಗೆ ತಿಳಿದುಕೊಂಡಿಲ್ಲ. ದೇವರ ಮೇಲೆ ನಂಬಿಕೆ ಹೊಂದಿದ್ದ ಗಾಂಧಿಯನ್ನು ಮಾತ್ರ ತಿಳಿದುಕೊಂಡಿದ್ದಾರೆ. ವೈಚಾರಿಕ ಭಾರತದಲ್ಲಿ ಹುಸಿ ದೇಶಭಕ್ತರನ್ನು ಇಂದು ಕಾಣುತ್ತಿದ್ದೇವೆ’ ಎಂದರು.
‘ಧರ್ಮ, ರಾಷ್ಟ್ರೀಯತೆ ವಿಷಯಗಳಿಗೆ ಬದಲಾಗಿ, ಗಾಂಧಿ, ಅಂಬೇಡ್ಕರ್ ಮತ್ತು ವಿವೇಕಾನಂದ ಸಂದೇಶಗಳ ಬಗ್ಗೆ ಯುವಕರಲ್ಲಿ ಅರಿವು ಮೂಡಿಸಬೇಕಿದೆ’ ಎಂದರು.
‘ಅಂಬೇಡ್ಕರ್ ಮತ್ತು ಗಾಂಧಿಯವರನ್ನು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನೋಡಲಾಗುತ್ತಿದೆ. ನಾಯಕ ಮತ್ತು ಖಳನಾಯಕನನ್ನು ಸೃಷ್ಟಿ ಮಾಡುವ ಕಾಲದಲ್ಲಿ ನಾವಿದ್ದೇವೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಈ ಹಿಂದೆ ಭಗತ್ ಸಿಂಗ್ರನ್ನು ನೆನೆಯುತ್ತಿದ್ದ ಆರ್ಎಸ್ಎಸ್ ಎಡಪಂಥೀಯ ಎನ್ನುವ ಕಾರಣಕ್ಕೆ ಅವರನ್ನು ಈಗ ಕೈಬಿಟ್ಟಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಹೈಜಾಕ್ ಮಾಡಲಾಗುತ್ತಿದೆ’ ಎಂದು ದೂರಿದರು.
‘ಸಾಂವಿಧಾನಿಕ ಸಂಸ್ಥೆಗಳ ದುರ್ಬಲಗೊಳಿಸುವಿಕೆ’ ಕುರಿತು ಪ್ರೊ. ಬಾಬು ಮ್ಯಾಥ್ಯೂ, ‘ಬಹುತ್ವದಿಂದ ಏಕಾಧಿಪತ್ಯದೆಡೆಗೆ’ ಬಗ್ಗೆ ಬಾಪು ಹೆದ್ದೂರ್ಶೆಟ್ಟಿ, ‘ಅಸಹಿಷ್ಣುತೆ ಭಾರತ’ ಕುರಿತು ಬಿ.ಟಿ. ಲಲಿತಾ ನಾಯಕ್ ಮಾತನಾಡಿದರು.
‘ನನ್ನ ಕನಸಿನ ಭಾರತ’ ಕುರಿತು ಯುವ ಸಮೂಹದೊಡನೆ ಸಂವಾದ ನಡೆಸುವ ಮೂಲಕ ಆಗಸ್ಟ್ ಕ್ರಾಂತಿಯ ಹೊಸ ಸಂದೇಶಗಳನ್ನು ಸಾರಲಾಯಿತು. ಸಮಾಜವಾದಿ ಅಧ್ಯಯನ ಕೇಂದ್ರ, ರಾಷ್ಟ್ರಸೇವಾದಳ, ಹಿಂದ್ ಮಜ್ದೂರ್ ಸಭಾ, ರೈತ ಸಂಘ ಮತ್ತು ಹಸಿರು ಸೇನೆ ಸಹಯೋಗ ವಹಿಸಿದ್ದವು.