ಬೆಂಗಳೂರು: ಹಲಸೂರು ಗೇಟ್ ಸಮೀಪದ ಧರ್ಮರಾಯ ದೇವಸ್ಥಾನದ ಬಳಿ ಶುಕ್ರವಾರ ರಾತ್ರಿ ಕರಗ ಆಚರಣೆ ವೇಳೆ ಇಬ್ಬರು ಪಾನಮತ್ತ ಯುವಕರು ಪೊಲೀಸರ ಎದುರೇ ಬಡಿದಾಡಿಕೊಂಡಿದ್ದಾರೆ.
ರಾತ್ರಿ 12.30ರ ಸುಮಾರಿಗೆ ಯುವಕರು ಏಕಾಏಕಿ ಒಬ್ಬರಿಗೊಬ್ಬರು ಹೊಡೆದುಕೊಳ್ಳುತ್ತ ಜನರ ಮೇಲೆ ಬಿದ್ದಿದ್ದಾರೆ. ಜಗಳ ಬಿಡಿಸಲು ಬಂದ ಪೊಲೀಸರನ್ನೇ ತಳ್ಳಿ ಗಲಾಟೆ ಮಾಡಿಕೊಂಡಿದ್ದಾರೆ. ಈ ದೃಶ್ಯವನ್ನು ಸಾರ್ವಜನಿಕರು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದು, ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದ್ದೆ.
ಹುಡುಗಿಯನ್ನು ಚುಡಾಯಿಸಿದ ವಿಚಾರಕ್ಕೆ ಗಲಾಟೆ ಶುರುವಾಯಿತು ಎನ್ನಲಾಗಿದೆ. ಆದರೆ, ‘ಕ್ಷುಲ್ಲಕ ಕಾರಣಕ್ಕೆ ಯುವಕರು ಕಿತ್ತಾಡಿಕೊಂಡಿದ್ದರು. ಇಬ್ಬರನ್ನೂ ವಶಕ್ಕೆ ಪಡೆದು, ಬುದ್ಧಿ ಹೇಳಿ ಬಿಟ್ಟು ಕಳುಹಿಸಿದೆವು’ ಎಂದು ಹಲಸೂರು ಗೇಟ್ ಪೊಲೀಸರು ಹೇಳಿದರು.