ಬೆಂಗಳೂರು: ಕೆಂಗೇರಿಯ ಬಳಿಯ ನೈಸ್ ಜಂಕ್ಷನ್ ಸಮೀಪದ ಆದಿಶಕ್ತಿ ಕೆಂಪಮ್ಮ ದೇವಿ ಪಲ್ಲಕ್ಕಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಪಲ್ಲಕ್ಕಿ ಉತ್ಸವದ ಅಂಗವಾಗಿ ಬೆಳಿಗ್ಗೆ ಕಳಶ ಸ್ಥಾಪನೆ, ಗಣಪತಿ ಪೂಜೆ, ಗೋಮಾತೆ ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಗಂಗಾ ಪೂಜೆ ನೆರವೇರಿತು. ಫಲ ಪಂಚಾಮೃತ ಅಭಿಷೇಕ, ದಿವ್ಯ ಅಲಂಕಾರ, ಕುಂಕುಮಾರ್ಚನೆ, ಮಹಾಮಂಗಳಾರತಿ ನಡೆಸಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಸ್.ಟಿ.ಸೋಮಶೇಖರ್, ‘ಮಿತಿ ಮೀರಿದ ನಗರೀಕರಣದ ನಡುವೆಯೂ ಕ್ಷೇತ್ರದಲ್ಲಿ ಗ್ರಾಮದೇವತೆಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇವುಗಳಿಂದ ಯುವಜನತೆಗೆ ದೇಶದ ಸಂಸ್ಕೃತಿಯ ಪರಿಚಯವಾಗುವುದಲ್ಲದೆ ಒಮ್ಮತ ಮೂಡಲು ವೇದಿಕೆ ದೊರೆತಂತಾಗುತ್ತದೆ’ ಎಂದರು.
ಅಂಚೇಪಾಳ್ಯ, ಕುಂಬಳಗೋಡು, ಸೂಲಿಕೆರೆ, ಕೊಮ್ಮಘಟ್ಟ, ಬೆಟ್ಟನಪಾಳ್ಯ, ಕೆಂಗೇರಿ, ಕೆಂಗೇರಿ ಉಪನಗರ, ಬಾಬುಸಾಬರಪಾಳ್ಯ, ಚಳ್ಳೇಘಟ್ಟ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು.