ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದ ಯುವತಿ

ಪರಿಚಯಸ್ಥನಿಂದ ಲೈಂಗಿಕ ದೌರ್ಜನ್ಯಕ್ಕೆ ಯತ್ನ
Last Updated 25 ಡಿಸೆಂಬರ್ 2018, 19:41 IST
ಅಕ್ಷರ ಗಾತ್ರ

ಬೆಂಗಳೂರು: ತನ್ನನ್ನು ಪ್ರೀತಿಸುವಂತೆ ಯುವತಿಯ ಹಿಂದೆ ಬಿದ್ದಿದ್ದ ಯುವಕನೊಬ್ಬ, ಸಹಚರರ ನೆರವಿನಿಂದ ಆಕೆಯನ್ನು ಅಪಹರಿಸಿ ಕಣ್ಣಿಗೆ ಖಾರದ ಪುಡಿ ಎರಚಿ ಲೈಂಗಿಕ ದೌರ್ಜನ್ಯವೆಸಗಲು ಯತ್ನಿಸಿದ್ದಾನೆ. ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಆರೋಪಿ ಸಚಿನ್ ಹಾಗೂ ಆತನ ಇಬ್ಬರು ಸಹಚರರು, ಡಿ. 19ರಂದು ಯುವತಿಯನ್ನು ಅಪಹರಿಸಿದ್ದರು. ಅವರಿಂದ ತಪ್ಪಿಸಿಕೊಂಡು ಬಂದ ಆಕೆ ದೂರು ನೀಡಿದ್ದಾಳೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯಾಗಿರುವ 18 ವರ್ಷದ ಯುವತಿಯನ್ನು ಸಚಿನ್ ಪರಿಚಯ ಮಾಡಿಕೊಂಡಿದ್ದ. ಕೆಲವು ದಿನಗಳ ಹಿಂದಷ್ಟೇ ಆತ ಪ್ರೇಮ ನಿವೇದನೆ ಮಾಡಿದ್ದ. ಆಕೆ ನಿರಾಕರಿಸಿದ್ದಳು.

ಡಿ. 19ರಂದು ಮಧ್ಯಾಹ್ನ ಯುವತಿ, ತರಗತಿ ಮುಗಿಸಿ ದಾಸರಹಳ್ಳಿ ನಿಲ್ದಾಣಕ್ಕೆ ಬಂದು ಮೆಟ್ರೊ ನಿಲ್ದಾಣದ ಕಡೆ ಹೊರಟಿದ್ದಳು. ಕಾರಿನಲ್ಲಿ ಬಂದಿದ್ದ ಆರೋಪಿಗಳು, ಆಕೆಯನ್ನು ಅಪಹರಿಸಿದ್ದರು. ತುಮಕೂರು ರಸ್ತೆ ಸಮೀಪ ಕರೆದೊಯ್ದು, ಅಲ್ಲಿಯೇ ಮತ್ತೊಂದು ಕಾರಿನಲ್ಲಿದ್ದ ಸಚಿನ್‌ಗೆ ಆಕೆಯನ್ನು ಒಪ್ಪಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಸಚಿನ್‌ನನ್ನು ಕಂಡ ಯುವತಿ, ‘ನನ್ನನ್ನು ಕಾಪಾಡು’ ಎಂದಿದ್ದಳು. ‘ನಾನೇ ನಿನ್ನನ್ನು ಅಪಹರಿಸಿಕೊಂಡು ಬರಲು ಹೇಳಿದ್ದೆ’ ಎಂದ ಆತ, ಯುವತಿಯನ್ನು ಕುಣಿಗಲ್ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಬಳಿ ಕರೆದೊಯ್ದಿದ್ದ. ಕಾರಿನ ಬಾಗಿಲು ಲಾಕ್‌ ಮಾಡಿದ್ದ. ಆಕೆಯ ಮೈ, ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ’

‘ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಆಕೆಯ ಕಣ್ಣಿಗೆ ಖಾರದ ಪುಡಿ ಎರಚಿದ್ದ. ಕಾರಿನಲ್ಲೆಲ್ಲ ಖಾರದ ಪುಡಿ ಚೆಲ್ಲಿ, ಅದರ ಘಾಟಿನಿಂದ ಉಸಿರಾಟಕ್ಕೆ ತೊಂದರೆ ಆಗಿದ್ದರಿಂದ ಆರೋಪಿ, ಕಾರಿನ ಬಾಗಿಲು ತೆರೆದಿದ್ದ. ಆಗ ಯುವತಿ, ಅಲ್ಲಿಂದ ತಪ್ಪಿಸಿಕೊಂಡು ಆಟೊ ಚಾಲಕರೊಬ್ಬರ ಬಳಿ ಹೋಗಿ ಸಹಾಯ ಕೇಳಿದ್ದಳು. ಆಟೊ ಚಾಲಕರೇ ಪೋಷಕರಿಗೆ ಕರೆ ಮಾಡಿ ಮನೆಗೆ ತಲುಪಿಸಿದ್ದಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT