ಬೆಂಗಳೂರು: ‘ಕೋರಮಂಗಲ ಪೊಲೀ ಸರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿ ಯುವತಿಯೊಬ್ಬಳು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಫೇಸ್ಬುಕ್ ಮೂಲಕ ದೂರು ನೀಡಿದ್ದಾರೆ.
ದೂರಿನ ಪ್ರತಿಯನ್ನು ‘ಬೆಂಗಳೂರು ಸಿಟಿ ಪೊಲೀಸ್’ ಫೇಸ್ಬುಕ್ ಖಾತೆಗೂ ಟ್ಯಾಗ್ ಮಾಡಿದ್ದಾರೆ.
‘ಏ. 6ರಂದು ಕೋರಮಂಗಲ ಠಾಣೆಯ ಸೆಲ್ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ. ಅವರ ಹೆಸರು ಮದನ್ ಇರಬಹುದು. ಸಾಬೀತುಪಡಿಸಲು ನನ್ನ ವೈದ್ಯಕೀಯ ವರದಿ ಹಾಗೂ ಹಲವು ಪುರಾವೆಗಳು ನನ್ನ ಬಳಿ ಇವೆ’ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
‘ದೌರ್ಜನ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದೇನೆ. ದೂರು ನೀಡಿದರೂ ಠಾಣೆಯಲ್ಲಿ ಸ್ವೀಕರಿಸುತ್ತಿಲ್ಲ. ಇತರೆ ಪೊಲೀಸರು ನನಗೆ ಸಹಾಯ ಮಾಡುತ್ತಿಲ್ಲ. ದಿನವೂ ಠಾಣೆಗೆ ಅಲೆಯಲು ಆಗುವುದಿಲ್ಲ. ನ್ಯಾಯಕ್ಕಾಗಿ ನಿಮಗೆ (ರಾಷ್ಟ್ರಪತಿ) ದೂರು ನೀಡುತ್ತಿದ್ದೇನೆ’ ಎಂದು ಯುವತಿ ಹೇಳಿದ್ದಾರೆ.
ಯುವತಿಯ ದೂರಿಗೆ ಪ್ರತಿಕ್ರಿಯಿಸಿರುವ ಆಗ್ನೇಯ ವಿಭಾಗದ ಡಿಸಿಪಿ ಇಷಾಪಂತ್, ‘ಯುವತಿಯಿಂದ ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.