ಕೆ.ಆರ್.ಪುರ: ‘ತಂತ್ರಜ್ಞಾನದ ಆವಿಷ್ಕಾರಗಳನ್ನು ಓದಿಗೆ ಪೂರಕವಾಗಿ ಬಳಸಿಕೊಂಡು ಯುವ ಜನರು ಸಾಧನೆಗಳನ್ನು ಮಾಡಬೇಕು’ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಕರಿಸಿದ್ದಪ್ಪ ಹೇಳಿದರು.
ಕೊತ್ತನೂರಿನ ವಿಜಯ ವಿಠಲ ತಾಂತ್ರಿಕ ಕಾಲೇಜಿನ 10ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
‘ಬೆಂಗಳೂರು ಐಟಿ ಹಬ್ ಆಗಿ ಬೆಳೆದಿದೆ. ಹೊರ ರಾಜ್ಯಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಬರುತ್ತಿದ್ದಾರೆ. ತಾಂತ್ರಿಕ ಕಾಲೇಜುಗಳು ಉತ್ತಮ ಶಿಕ್ಷಣ ಕೊಡುವ ಮೂಲಕ ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸಬೇಕು’ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್.ವೇಣುಗೋಪಾಲ್,‘ಮಾಹಿತಿಯನ್ನು ಪಡೆಯಲು ಹಲವಾರು ಆನ್ಲೈನ್ ಮೂಲಗಳಿವೆ. ಆದರೆ, ತರಗತಿಗಳಲ್ಲಿ ಶಿಕ್ಷಕರಿಂದ ಕಲಿತ ಜ್ಞಾನಕ್ಕೆ ಸಮಾನವಾದುದು ಯಾವುದೂ ಇಲ್ಲ’ ಎಂದು ತಿಳಿಸಿದರು.