ಬೆಂಗಳೂರು: ಲಾಲ್ಬಾಗ್ನಲ್ಲಿ ನಡೆಯುತ್ತಿರುವ ‘ಸ್ವಾತಂತ್ರೋತ್ಸವ ಫಲಪುಷ್ಪ ಪ್ರದರ್ಶನ’ಕ್ಕೆ ಬಕ್ರೀದ್ ರಜೆ ಇದ್ದ ಕಾರಣ ಸೋಮವಾರ 50,500 ಮಂದಿ ಭೇಟಿ ನೀಡಿದರು. ಭಾನುವಾರಕ್ಕೆಹೋಲಿಸಿದರೆ ಉದ್ಯಾನಕ್ಕೆ ಭೇಟಿ ನೀಡಿದವರ ಸಂಖ್ಯೆ ಕಡಿಮೆ ಇತ್ತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜಯಚಾಮರಾಜ ಒಡೆಯರ್ ಅವರ ನೂರಕ್ಕೂ ಹೆಚ್ಚಿನ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಒಡೆಯರ್ ಭಾವಚಿತ್ರದ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನ ಮುಗಿಬಿದ್ದರು. ಇದಕ್ಕಾಗಿ ಸಾರ್ವಜನಿಕ ಸಂಪರ್ಕ ಇಲಾಖೆಯು ಸೆಲ್ಫಿ ಸ್ಟ್ಯಾಂಡ್ ವ್ಯವಸ್ಥೆ ಮಾಡಿತ್ತು.
ಊಟಿ, ಕೆಮ್ಮಣ್ಣುಗುಂಡಿ, ನಂದಿ ಬೆಟ್ಟ, ಕೆಆರ್ಎಸ್ ಹಾಗೂ ವಿವಿಧ ಉದ್ಯಾನಗಳ ಬಗ್ಗೆ ಮಾಹಿತಿ ಒದಗಿಸುವ ‘ಗಿರಿಧಾಮಗಳ ಮಾಹಿತಿ ಕೇಂದ್ರ’ವನ್ನು ತೆರೆಯಲಾಗಿತ್ತು.
ಉದ್ಯಾನದ ಬೋನ್ಸಾಯ್ ಪಾರ್ಕ್ ಬಳಿಮಾರ್ಗ ಜ್ಯೋತಿ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ‘ಅಂಧರ ವಾದ್ಯಗೋಷ್ಠಿ’ ಆಯೋಜಿಸಲಾಗಿತ್ತು. ಸುಮಧುರ ಕಂಠದಿಂದ ಕನ್ನಡ ಚಲನಚಿತ್ರ ಗೀತೆಗಳನ್ನು ಹಾಡಿ ಜನರನ್ನು ರಂಜಿಸಿದರು.