ಹುಬ್ಬಳ್ಳಿ: ನಗರದ ಬೆಂಗೇರಿ ಸಂತೆ ಮೈದಾನದಲ್ಲಿ ಕಸ ಸಾಂದ್ರೀಕರಣ ಕೇಂದ್ರ ನಿರ್ಮಾಣ ಮಾಡುವ ಪ್ರಸ್ತಾವಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗನಿ ವಲಿ ಅಹಮ್ಮದ್, ಇದೊಂದು ಜನ ವಸತಿ ಪ್ರದೇಶವಾಗಿದ್ದು, ಇಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡುವುದು ಸರಿಯಲ್ಲ. ಅಲ್ಲದೆ ಪ್ರತಿ ವಾರ ನಡೆಯುವ ಸಂತೆಗೆ ಸಾವಿರಕ್ಕೂ ಅಧಿಕ ವ್ಯಾಪಾರಿಗಳು ಹಾಗೂ ಸಾವಿರಾರರು ಜನರು ಬರುತ್ತಾರೆ. ಇದೇ ಮೈದಾನದಲ್ಲಿ ಇಂದಿರಾ ಕ್ಯಾಂಟೀನ್ ಸಹ ಇರುವುದರಿಂದ ದುರ್ವಾಸನೆಯಲ್ಲಿ ಊಟ ಮಾಡಲು ಸಾಧ್ಯವಾಗದು ಎಂದರು.
ಕಾಮಗಾರಿ ಆರಂಭವಾದ ನಂತರವೇ ಈ ಘಟಕ ನಿರ್ಮಾಣದವಾಗುತ್ತಿರುವ ವಿಷಯ ಗೊತ್ತಾಯಿತು. ಆದ್ದರಿಂದ ಪಕ್ಷಾತೀತವಾಗಿ ಹೋರಾಟ ಮಾಡಲಾಗುತ್ತಿದೆ. ಘಟಕವನ್ನು ಸ್ಥಳಾಂತರ ಮಾಡುವವರೆಗೂ ಹೋರಾಟ ನಿಲ್ಲದು ಎಂದರು.
ಈ ಜಾಗ ತೋಟಗಾರಿಕೆ ಇಲಾಖೆಗೆ ಸೇರಿದ್ದಾಗಿದ್ದು, ಅವರು ಸಹ ಕಾಮಗಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಭೆ ನಡೆಸಿರುವ ಜಿಲ್ಲಾಧಿಕಾರಿ 19ರ ವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದರು. ಕಲ್ಲದರ ಮುಲ್ಲಾ, ಪ್ರಕಾಶ ಜಾಧವ, ಬಿ.ಕೆ. ಕಲಬುರ್ಗಿ, ಕಾಶೀಮ ಕುಡಲಗಿ ಇದ್ದರು.