ಮದ್ದೂರು: ಉರಿ ಬಿಸಿಲಿನಲ್ಲೇ ಪಟ್ಟಣದ ಶಿಕ್ಷಕರ ಬಡಾವಣೆ ರಸ್ತೆಯಲ್ಲಿ ಜನರ ಎದುರು ನಾಗರಹಾವೊಂದು ಮೊಟ್ಟೆ ಇಟ್ಟ ಅಪರೂಪದ ಪ್ರಸಂಗ ಗುರುವಾರ ನಡೆದಿದೆ.
ಶಿಕ್ಷಕರ ಬಡಾವಣೆಯ ಮನೆಯೊಂದರಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ಉರಗ ಪ್ರೇಮಿ ಮಾ.ನಾ.ಪ್ರಸನ್ನ ಕುಮಾರ್ ಅವರಿಗೆ ಸ್ಥಳೀಯರು ಕರೆಮಾಡಿದ್ದಾರೆ. ಸ್ಥಳಕ್ಕೆ ಬಂದ ಅವರು, ಹಾವು ಹಿಡಿದು ಬಯಲಿನಲ್ಲಿ ಬಿಟ್ಟಾಗ ಮೊಟ್ಟೆ ಇಡಲು ಆರಂಭಿಸಿತು.
ಯಾರೂ ಕಾಣಿಸದ ಪ್ರದೇಶದಲ್ಲಿ ಮೊಟ್ಟೆ ಇಡುವ ಹಾವು, ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಜನರ ಎದುರಿಗೆ ಸುಮಾರು 14 ಮೊಟ್ಟೆ ಇಟ್ಟು ಅಚ್ಚರಿಗೆ ಕಾರಣವಾಯಿತು.
ಮೊಟ್ಟೆ ಇಟ್ಟ ನಂತರ ಹಾವನ್ನು ಕಾಡಿಗೆ ಬಿಡಲಾಗಿದ್ದು, ಮೊಟ್ಟೆಗಳನ್ನು ಸಂರಕ್ಷಣೆ ಮಾಡಲಾಗುತ್ತದೆ. ಮೊಟ್ಟೆಯಿಂದ ಹಾವಿನ ಮರಿ ಹೊರಗೆ ಬಂದ ನಂತರ ಕಾಡಿಗೆ ಬಿಡುವುದಾಗಿ ಪ್ರಸನ್ನಕುಮಾರ್ ತಿಳಿಸಿದರು.