ದಾವಣಗೆರೆ: ಅಣಜಿ ಗೊಲ್ಲರಹಳ್ಳಿ ಗ್ರಾಮದ ಬಳಿ ರಸ್ತೆಯಲ್ಲಿ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ವ್ಯಕ್ತಿಯೊಬ್ಬರು ಬೈಕ್ನಿಂದ ಮೃತಪಟ್ಟಿದ್ದಾರೆ.
ಜಗಳೂರು ತಾಲ್ಲೂಕಿನ ಕಲ್ಲೇದೇವರಪುರ ಗ್ರಾಮದ ಜಿ.ಎನ್. ಕೃಷ್ಣಮೂರ್ತಿ (37) ಮೃತಪಟ್ಟವರು. ಇವರು ಬೈಕ್ನಲ್ಲಿ ಅಣಜಿ-ಉಚ್ಚಂಗಿದುರ್ಗ ಗ್ರಾಮದ ರಸ್ತೆಯಲ್ಲಿ ಉಚ್ಚಂಗಿದುರ್ಗ ಗ್ರಾಮಕ್ಕೆ ಹೋಗುತ್ತಿದ್ದಾಗ ರಸ್ತೆಯಲ್ಲಿ ಏಕಾ-ಏಕಿ ನಾಯಿ ಅಡ್ಡ ಬಂದಿದೆ. ನಾಯಿಯನ್ನು ತಪ್ಪಿಸಲು ಹೋಗಿ ರಸ್ತೆಯಲ್ಲಿ ಬಿದ್ದಾಗ ತಲೆಯ ಹಿಂಭಾಗಕ್ಕೆ ಮತ್ತು ಎಡಗಣ್ಣಿನ ಹತ್ತಿರ, ಎರಡು ಮೊಣಕಾಲಿಗೆ ಪೆಟ್ಟು ಬಿದ್ದು ಗಾಯವಾಗಿದೆ.
ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜಾಟ: ₹26 ಸಾವಿರ ವಶ
ದಾವಣಗೆರೆ: ಚನ್ನಗಿರಿ ತಾಲ್ಲೂಕು ಬಸವಾಪುರ ಗ್ರಾಮದ ಮಾರಿಕಾಂಬ ದೇವಸ್ಥಾನದ ಮುಂಭಾಗ ಅಂದರ್ ಬಾಹರ್ ಜೂಜಾಟವಾಡುತ್ತಿದ್ದ ಐದು ಮಂದಿಯನ್ನು ಬಂಧಿಸಿ ಅವರಿಂದ ₹ 26 ಸಾವಿರವನ್ನು ವಶಪಡಿಸಿಕೊಂಡಿದ್ದಾರೆ.