ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾವು ಮೇಳ ಆಯೋಜಿಸಿ ಯಶಸ್ವಿಯಾಗಿರುವ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದ್ದು, ಈ ಬಾರಿ ಮಾವಿನ ಮಳಿಗೆಗಳನ್ನು ಬಹುರಾಷ್ಟ್ರೀಯ ಕಂಪನಿಗಳ ಆವರಣಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದೆ.
ಟೆಕಿಗಳ ಅನುಕೂಲಕ್ಕಾಗಿ ಇದನ್ನು ಮಾಡಲಾಗುತ್ತಿದ್ದು, ಈ ಸಂಬಂಧ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ರೈತರು ಹಾಗೂ ಕಂಪನಿಗಳೊಂದಿಗೆ ಮಾತುಕತೆ ನಡೆಸಿದೆ.
ಮಂಗಳೂರಿನ ಐಟಿ ಕಂಪನಿಗಳ ಆವರಣಗಳಲ್ಲಿ ಈಗಾಗಲೇಮಳಿಗೆಗಳನ್ನು ಸ್ಥಾಪಿಸಲಾಗಿದೆ. ಕದ್ರಿ ಐಟಿ ಪಾರ್ಕ್ನಲ್ಲಿಯೂ ಮಳಿಗೆಗಳ ಸ್ಥಾಪನೆಗೆ ಮುಂದಾಗಿದೆ.
‘ಈ ಪ್ರಸ್ತಾವವನ್ನು ಖಾಸಗಿ ಕಂಪನಿಗಳ ಮುಂದಿಟ್ಟಿದ್ದೇವೆ. ಆವರಣದಲ್ಲಿ ರೈತರು ಮಾವು ಮಳಿಗೆಗಳನ್ನು ನಿರ್ಮಿಸಲು ಕಂಪನಿಯೊಂದು ಸಮ್ಮತಿ ಸೂಚಿಸಿದೆ. ಇದರಿಂದ ರೈತರ ಮಾವು ಮಾರಾಟಕ್ಕೆ ಉತ್ತಮ ವೇದಿಕೆ ಸಿಗಲಿದೆ’ ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ.ನಾಗರಾಜು ತಿಳಿಸಿದರು.
‘ಇತ್ತೀಚೆಗೆ ಬೆಂಗಳೂರಿನ ಖೋಡೆ ಟವರ್ಸ್ನಲ್ಲಿ ಮಾವು ಮಳಿಗೆ ಸ್ಥಾಪಿಸಲಾಗಿದೆ. ಉತ್ತಮ ವಿಧಾನಗಳನ್ನು ಬಳಸಿ ಮಾವು ಬೆಳೆದು ಪ್ರಮಾಣ ಪತ್ರ ಪಡೆದುಕೊಂಡ ರೈತರನ್ನು ಗುರುತಿಸಲಾಗಿದ್ದು, ಐಟಿ ಕಂಪನಿಗಳಿಂದ ಮಾವು ಪೂರೈಕೆಗೆ ಬೇಡಿಕೆ ಬಂದರೆ ರೈತರೇ ಅಲ್ಲಿಗೆ ಹೋಗಲಿದ್ದಾರೆ’ ಎಂದರು.