ಹೆಸರಘಟ್ಟ: ಮನೆಗಳ ಮುಂದೆ ಸೊಬಗಿನಿಂದ ಅರಳಿದ ರಂಗೋಲಿ, ಹೊಸ ಬಟ್ಟೆ ತೊಟ್ಟು ಬಿಗುತ್ತಿದ್ದ ಚಿಣ್ಣರು, ವಿವಿಧ ಪುಷ್ಪಗಳಿಂದ ಅಲಂಕೃತಗೊಂಡು ಆರತಿ ಕಳಸ ಹಿಡಿದ ಬಂದ ಮುತ್ತೈದೆಯರು.
ಇವೆಲ್ಲವು ಗುಡ್ಡದಹಳ್ಳಿ ಗ್ರಾಮದ ಮಾರಮ್ಮ ಮತ್ತು ಗ್ರಾಮ ದೇವತೆ ಜಾತ್ರೆಯಲ್ಲಿ ಅನಾವರಣಗೊಂಡವು. ಮೂರು ದಿನ ನಡೆದ ಜಾತ್ರೆಯಲ್ಲಿ ಊರಾಚೆಯ ಪಂಚದೇವರಿಗೆ ತಂಬಿಟ್ಟಿನ ಆರತಿಯನ್ನು ಗ್ರಾಮಸ್ಥರು ಬೆಳಗಿದರು. ಮಾರಮ್ಮ ಮತ್ತು ಗ್ರಾಮದೇವತೆಗೆ ನೈವೇದ್ಯ ಅರ್ಪಿಸಲಾಯಿತು.
ಕೊಂಡೋತ್ಸವದಲ್ಲಿ ಭಕ್ತರು ಕೊಂಡ ದಾಟಿದರು. ಗ್ರಾಮದ ಬೀದಿಗಳಲ್ಲಿ ದೇವಿಯನ್ನು ಮೆರವಣಿಗೆ ಮಾಡಲಾಯಿತು. ಗ್ರಾಮಸ್ಥರು ದೇವಿಗೆ ಮಡಿಲಕ್ಕಿಯನ್ನು ನೀಡಿದರು. ಗಟಗಟೆ ಹೊತ್ತುಕೊಂಡು ಮಡಿವಾಳರು ಮಾರಮ್ಮ ದೇವಿಯನ್ನು ಗ್ರಾಮದ ಗಡಿಯನ್ನು ಸಂಜೆ ದಾಟಿಸಿದರು.
‘ಉತ್ತಮ ಮಳೆ ಬಾರದಿದ್ದಾಗ, ದನ–ಕರುಗಳಿಗೆ ರೋಗ–ರುಜಿನೆ ಬಂದಾಗ ದೇವಿಯನ್ನು ಅರಾಧಿಸುವ ಪರಿಪಾಠ ಗ್ರಾಮದಲ್ಲಿದೆ. ಈ ಬಾರಿಯೂ ಮಳೆಗಾಗಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡಿದೇವು’ ಎಂದು ಗ್ರಾಮದ ನಿವಾಸಿ ಸುರೇಶ್ ತಿಳಿಸಿದರು.