ದಾಬಸ್ಪೇಟೆ: ನೀರು ಇಲ್ಲದೆ ಸೋಂಪುರ ಹೋಬಳಿಯ ಕೆಲವು ಭಾಗಗಳಲ್ಲಿ ರಾಗಿ ಫಸಲು ಬಾಡುತ್ತಿದೆ.
‘ಮಣ್ಣು ತೀರಾ ಒಣಗಿದಂತೆ ಕಾಣುತ್ತಿದೆ. ಇನ್ನೂ ಹೆಚ್ಚಿನ ನೀರು ಬೇಕಿತ್ತು’ ಎಂದು ಚನ್ನೊಹಳ್ಳಿಯ ರೈತ ಹನುಮಂತರಾಯಪ್ಪ ಬೇಸರ ವ್ಯಕ್ತಪಡಿಸಿದರು.
ಮಳೆಯಾಶ್ರಿತ ಪ್ರದೇಶವಾಗಿರುವುದರಿಂದ ಇಲ್ಲಿನ ರೈತರು ರಾಗಿ ಬೆಳೆಯು ವುದು ವಾಡಿಕೆ. ಅದರ ಜೊತೆಗೆ ಅವರೆ, ತೊಗರಿ ಮತ್ತು ಮುಸುಕಿನ ಜೋಳವನ್ನು ಅಲ್ಪಸ್ವಲ್ಪ ಬೆಳೆಯುತ್ತಾರೆ. ಅವುಗಳಿಗೂ ನೀರಿನ ಕೊರತೆ ಎದ್ದು ಕಾಣುತ್ತಿದೆ.
‘ಈ ವರ್ಷ ಮಳೆ ಸ್ವಲ್ಪ ಆಗಿದೆ. ಆದರೂ ಭೂಮಿ, ಬೇಗನೆ ತೇವಾಂಶವನ್ನು ಕಳೆದುಕೊಂಡಿದೆ. ಆದ್ದರಿಂದ ಇಳುವರಿ ಕೂಡ ತೀರಾ ಕಡಿಮೆಯಾಗಿದೆ’ ಎಂದು ರೈತರು ಆತಂಕ ವ್ಯಕ್ತಪಡಿಸಿದರು.
‘ಸಕಾಲದಲ್ಲಿ ಮಳೆ ಬಿದ್ದಿದ್ದರಿಂದ ರೈತರು ಬಿತ್ತನೆ ಮಾಡಿದ್ದರು. ಗಿಡಗಳು ಕೂಡ ಹಸನಾಗಿ ಬೆಳೆದಿದ್ದವು. ಆದರೆ ತೆನೆ ಬಲಿಯುವ ಸಮಯಕ್ಕೆ ಮಳೆ ಬರಲಿಲ್ಲ. ಬಿಸಿಲು ಕೂಡ ಇದ್ದಕ್ಕಿದ್ದಂತೆ ಹೆಚ್ಚಾಯಿತು. ಇದರಿಂದ ಫಸಲು ಕಡಿಮೆಯಾಗಿದೆ’ ಎಂದು ನರಸೀಪುರದ ಎನ್.ಜಿ.ರಮೇಶ್ ತಿಳಿಸಿದರು.