ಬೆಂಗಳೂರು: ‘ಕಬ್ಬಿಣದ ಅದಿರು ನೀತಿಯನ್ನು ಸರಳೀಕರಣಗೊಳಿಸಿ ಅಂತರರಾಜ್ಯ ತಾರತಮ್ಯ ಸರಿಪಡಿಸಬೇಕು’ ಎಂದು ಒತ್ತಾಯಿಸಿ ಗಣಿ ಅವಲಂಬಿತರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೇರಿದ್ದ ಪ್ರತಿಭಟನಾಕಾರರು, ತಮ್ಮ ಬೇಡಿಕೆಗಳ ಘೋಷಣಾ ಫಲಕಗಳನ್ನು ಹಿಡಿದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗ, ಬಳ್ಳಾರಿ, ಹೊಸಪೇಟೆ ಹಾಗೂ ಸುತ್ತಮುತ್ತಲು ಇರುವ ಗಣಿಗಾರಿಕೆಯನ್ನು ಅವಲಂಬಿಸಿ ಜೀವನ ನಡೆಸುತ್ತಿರುವ ನಿವಾಸಿಗಳು ಮಕ್ಕಳ ಸಮೇತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
’ಮೂರು ನಗರಗಳಲ್ಲಿ 35ರಿಂದ 40 ಗಣಿಗಳಿದ್ದು, ಅವುಗಳನ್ನು ಅವಲಂಬಿಸಿ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಸರ್ಕಾರದ ಕೆಲ ನೀತಿಗಳು ಗಣಿಗಾರಿಕೆಗೆ ಅಡ್ಡಿಯಾಗಿದ್ದು, ಸ್ಥಳೀಯ ನಿವಾಸಿಗಳು ಉದ್ಯೋಗ ವಂಚಿತ ರಾಗುತ್ತಿದ್ದಾರೆ’ ಎಂದು ಚಿತ್ರದುರ್ಗದ ಎಸ್.ರಾಜಕುಮಾರ್ ಹೇಳಿದರು.
‘ಚಿತ್ರದುರ್ಗ, ಬಳ್ಳಾರಿ, ಹೊಸಪೇಟೆ ಬರಪೀಡಿತ ಪ್ರದೇಶಗಳು. ಇಲ್ಲಿಯ ಜನ ಬದುಕುವುದೇ ಕಷ್ಟವಾಗಿದೆ.ಕಬ್ಬಿಣ ಅದಿರು ರಫ್ತು ಸಂಬಂಧ ಹೊರ ರಾಜ್ಯಗಳು ತಮ್ಮ ನೀತಿಯನ್ನು ಸರಳೀಕರಣಗೊಳಿಸಿವೆ. ಆದರೆ, ರಾಜ್ಯ ಸರ್ಕಾರ ಆ ರೀತಿ ಮಾಡದೇ ತಾರತಮ್ಯ ಅನುಸರಿಸುತ್ತಿದೆ’ ಎಂದು ದೂರಿದರು.
‘ಕಬ್ಬಿಣದ ಅದಿರಿನ ನೇರ ಮಾರಾಟಕ್ಕೆ ಅನುಮತಿ ನೀಡಬೇಕು. ಅದಿರಿನ ಆಮದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿ ಈ ಪ್ರತಿಭಟನೆ ಮಾಡಿದ್ದೇವೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.