ಕೊಳ್ಳೇಗಾಲ: ಸುಳ್ವಾಡಿ ಮಾರಮ್ಮ ದೇವಾಲಯದ ವಿಷ ಪ್ರಸಾದ ಸೇವನೆಯಿಂದ ಅಸ್ವಸ್ಥಗೊಂಡು ಮೈಸೂರಿನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಹಿಂತಿರುಗಿದ ಬಳಿಕ ಅಸ್ವಸ್ಥರಾಗಿನಗರದ ಉಪವಿಭಾಗ ಆಸ್ಪತ್ರೆಗೆ ದಾಖಲಾಗಿರುವ ಪಳನಿಯಮ್ಮ, ಮಾದಮ್ಮ, ಮಾದ, ಈರಣ್ಣ, ಸೌಂದರ್ಯ, ಆರಾಯಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಭಾನುವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಸಂತ್ರಸ್ತರಲ್ಲಿ ಧೈರ್ಯ ತುಂಬಿದ ಅವರು, ‘ಭಯಪಡುವ ಅವಶ್ಯಕತೆ ಇಲ್ಲ. ನಿಮ್ಮ ಕುಟುಂಬ ನಿರ್ವಹಣೆಗೆ ಜಿಲ್ಲಾಡಳಿತ ಎಲ್ಲ ಸೌಲಭ್ಯ ಒದಗಿಸಲಿದೆ. ನೀವು ಗುಣಮುಖರಾಗುವವರೆಗೆ ಎಲ್ಲಾ ಔಷಧ ಹಾಗೂ ಆಸ್ಪತ್ರೆ ಖರ್ಚುಗಳನ್ನುಸರ್ಕಾರವೇ ಭರಿಸುತ್ತದೆ. ಅಲ್ಲದೆ, ಸಂತ್ರಸ್ತ ಕುಟುಂಬದವರಿಗೆ ಸರ್ಕಾರದಿಂದ ಸಾಲ ಸೌಲಭ್ಯ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಈ ಪ್ರಕರಣದಲ್ಲಿ ಮೃತಪಟ್ಟರವರು, ಅಸ್ವಸ್ಥರಾಗಿರುವವರಲ್ಲಿ ಹಿಂದುಳಿದವರು ಹೆಚ್ಚಾಗಿರುವುದರಿಂದಅವರಿಗೆ ನಮ್ಮ ಇಲಾಖೆಯ, ನಿಗಮ ಮಂಡಳಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ₹ 2 ಲಕ್ಷದವರೆಗೆ ಸಾಲ ಕೊಡಿಸುವೆ’ ಎಂದು ಆಶ್ವಾಸನೆ ನೀಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಉಪವಿಭಾಗಾಧಿಕಾರಿ ಬಿ.ಫೌಜಿಯಾ ತರನ್ನುಮ್, ಉಪವಿಭಾಗ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಮೋಹನ್, ವೈದಾಧಿಕಾರಿ ಡಾ.ರವೀಂದ್ರ, ಡಾ.ಲೋಕೇಶ್ವರಿ, ಸರ್ಕಲ್ ಇನ್ಸ್ಪೆಕ್ಟರ್ ಶ್ರೀಕಾಂತ್ ಇದ್ದರು.