ಮಂಡ್ಯ: ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮನ್ಮುಲ್) ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಎಂಟು ಮಂದಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಜೆಡಿಎಸ್ ಅಧಿಕಾರ ಹಿಡಿಯುವುದು ಖಚಿತವಾಗಿದೆ.
ಏಳು ತಾಲ್ಲೂಕಿನಿಂದ 12 ಸ್ಥಾನಗಳಿಗೆ ನಡೆದ ಮತದಾನ ನಡೆಯಿತು. ಕಳೆದ ಬಾರಿ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಮುಖಂಡ ಕದಲೂರು ರಾಮಕೃಷ್ಣ ಸೋಲು ಕಂಡಿದ್ದು ಭಾರಿ ಮುಖಭಂಗ ಅನುಭವಿಸಿದ್ದಾರೆ. ಭ್ರಷ್ಟಾಚಾರದ ಆರೋಪದ ಮೇಲೆ ಅವರ ಆಡಳಿತ ಮಂಡಳಿಯನ್ನು ಸರ್ಕಾರ ವಜಾ ಮಾಡಿತ್ತು. ಹಣ ದುರುಪಯೋಗದ ಆರೋಪ ಹೊತ್ತಿದ್ದ ಅವರು ಚುನಾವಣೆಗೆ ಸ್ಪರ್ಧಿಸಬಾರದು ಎಂದು ಹೋರಾಟ ನಡೆದಿತ್ತು. ಆದರೂ ಅವರು ಸ್ಪರ್ಧಿಸಿ ಸೋಲು ಕಂಡಿದ್ದಾರೆ.
ಮದ್ದೂರು ತಾಲ್ಲೂಕಿನಿಂದ ಎರಡು ಸ್ಥಾನವಿದ್ದು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಸ್.ಪಿ.ಸ್ವಾಮಿ 123 ಮತ ಗಳಿಸಿದ್ದು ಗೆಲುವಿನ ನಗೆ ಬೀರಿದ್ದಾರೆ. ಮುಂದೆ ಇವರೇ ಅಧ್ಯಕ್ಷರಾಗುತ್ತಾರೆ ಎಂಬ ಸುದ್ದಿ ಕೇಳಿ ಬಂದಿದೆ. ಜೊತೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ರೂಪಾ ಅವರು 87 ಮತ ಗಳಿಸಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕದಲೂರು ರಾಮಕೃಷ್ಣ 82, ಎಚ್.ಸಿ.ಮಂಜು 7, ಪುಟ್ಟರಾಮು 3 ಮತ ಗಳಿಸಿ ಸೋಲು ಕಂಡಿದ್ದಾರೆ.
ಮಳವಳ್ಳಿ ತಾಲ್ಲೂಕಿನಲ್ಲಿ ಒಂದು ಸ್ಥಾನವಿದ್ದು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಂ.ವಿ.ವಿಶ್ವನಾಥ್ - 73 ಗೆಲುವು ಸಾಧಿಸಿದ್ದಾರೆ. ಪಾಂಡವಪುರ ತಾಲ್ಲೂಕಿನಲ್ಲಿ 1 ಸ್ಥಾನವಿದ್ದು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕೆ.ರಾಮಚಂದ್ರ 72 ಮತಗಳಿಸಿ ಗೆಲುವು ಸಾಧಿಸಿದ್ದಾರೆ. ಶ್ರೀರಂಗಪಟ್ಟಣದಲ್ಲಿ 1 ಸ್ಥಾನವಿದ್ದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ.ಶೆಟ್ಟಿಹಳ್ಳಿ ಬೋರೇಗೌಡ 33 ಮತಗಳಿಸಿ ಗೆದ್ದಿದ್ದಾರೆ.
ಕೆ.ಆರ್.ಪೇಟೆಯಲ್ಲಿ 2 ಸ್ಥಾನಗಳಿದ್ದು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಚ್.ಟಿ.ಮಂಜು 115, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ರವಿ 98 ಮತಗಳಿಸಿ ಗೆಲುವು ಸಾಧಿಸಿದ್ದಾರೆ. ಎಂ.ಬಿ.ಹರೀಶ 87, ಎ.ಎಸ್.ಕಲ್ಪನಾ 28, ಎಸ್.ಎಂ.ಅಂಬರೀಶ್ 21 ಮತ ಗಳಿಸಿ ಸೋಲು ಕಂಡಿದ್ದಾರೆ.
ನಾಗಮಂಗಲ ತಾಲ್ಲೂಕಿನಲ್ಲಿ 2 ಸ್ಥಾನ ಹೊಂದಿದ್ದು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಎನ್.ಬಾಲಕೃಷ್ಣ 149, ರವಿ 114 ಮತ ಗಳಿಸಿ ಗೆಲುವು ಸಾಧಿಸಿದ್ದಾರೆ. ಎಸ್.ಎನ್.ಲಕ್ಷ್ಮಿ ನಾರಾಯಣ 112, ಎಸ್.ಎಂ.ಯದುರಾಜ 66 ಮತಗಳಿಸಿ ಸೋಲುಂಡಿದ್ದಾರೆ.
ಮಂಡ್ಯ ತಾಲ್ಲೂಕಿನಿಂದ 3 ಸ್ಥಾನಗಳಿದ್ದು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ 156, ಕಾಂಗ್ರೆಸ್ ಬೆಂಬಲಿತ ಯು.ಸಿ.ಶಿವಕುಮಾರ್ 129, ಜೆಡಿಎಸ್ ಬೆಂಬಲಿತ ರಘುನಂದನ್ 117 ಗಳಿಸಿ ಗೆಲುವು ಸಾಧಿಸಿದ್ದಾರೆ. ಕಾಳೇಗೌಡ 111, ಬಿ.ಚಂದ್ರ 6 ಮತ ಗಳಿಸಿ ಸೋಲು ಕಂಡಿದ್ದಾರೆ.
ಒಟ್ಟು 1,087 ಮತದಾರರಿದ್ದು ಶೇ 99.72 ಮತದಾನವಾಗಿದೆ. ಬೆಳಿಗ್ಗೆ 9 ಗಂಟೆಗೆ ಆರಂಭವಾದ ಮತದಾನ ಸಂಜೆ 4 ಗಂಟೆಯವರೆಗೂ ನಡೆಯಿತು. ಬೆಳಿಗ್ಗೆ ಮಂದಗತಿಯಲ್ಲಿ ಆರಂಭವಾದ ಮತದಾನ ಮಧ್ಯಾಹ್ನದ ವೇಳೆಗೆ ಬಿರುಸಿನಿಂದ ನಡೆಯಿತು. ಶೇ 99.72 ಮತದಾನವಾಗಿದೆ. ಬೆಳಿಗ್ಗೆ 9 ಗಂಟೆಗೆ ಆರಂಭವಾದ ಮತದಾನ ಸಂಜೆ 4 ಗಂಟೆಯವರೆಗೂ ನಡೆಯಿತು. ಬೆಳಿಗ್ಗೆ ಮಂದಗತಿಯಲ್ಲಿ ಆರಂಭವಾದ ಮತದಾನ ಮಧ್ಯಾಹ್ನದ ವೇಳೆಗೆ ಬಿರುಸಿನಿಂದ ನಡೆಯಿತು.
************
ಖಾತೆ ತೆರೆದ ಬಿಜೆಪಿ
ಇದೇ ಮೊದಲ ಬಾರಿಗೆ ಮನ್ಮುಲ್ ಆಡಳಿತದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ರೂಪಾ ಖಾತೆ ತೆರೆದಿದ್ದಾರೆ. ಕಾಂಗ್ರೆಸ್ ಬೆಂಬಲದಿಂದ ಗೆದ್ದಿರುವ ಮೂವರೂ ಅಭ್ಯರ್ಥಿಗಳು ಪುನರಾಯ್ಕೆಯಾಗಿದ್ದಾರೆ.ಜೆಡಿಎಸ್ನಿಂದ ವಿಶ್ವನಾಥ್ ಪುನರಾಯ್ಕೆಯಾಗಿದ್ದಾರೆ. ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜು, ನಾಗಮಂಗಲ ಶಾಸಕ ಸುರೇಶ್ಗೌಡ ಬೆಂಬಲಿಗರು ಗೆಲುವಿನ ನಗೆ ಬೀರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.