ಬೆಂಗಳೂರು: ಅತ್ತಿಗೆಗೆ ಲೈಂಗಿಕ ಕಿರುಕುಳ ನೀಡಿ ಅವರು ಆತ್ಮಹತ್ಯೆಗೆ ಯತ್ನಿಸಲು ಕಾರಣನಾದ ಆರೋಪದಡಿ ಮೈದುನ ಸತೀಶ್ ಎಂಬಾತನನ್ನು ಸಿದ್ದಾಪುರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
‘ಸ್ಥಳೀಯ ನಿವಾಸಿ ಸತೀಶ್, ನಗರದ ಕೋ–ಆಪರೇಟಿವ್ ಸೊಸೈಟಿಯೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಆತನ ವಿರುದ್ಧ
ಅತ್ತಿಗೆಯೇ ದೂರು ಕೊಟ್ಟಿದ್ದರು’ ಎಂದು ಪೊಲೀಸರು ಹೇಳಿದರು.
‘28 ವರ್ಷದ ಸಂತ್ರಸ್ತೆ ಪತಿ ಹಾಗೂ ಅತ್ತೆ ಜೊತೆಯಲ್ಲಿ ವಾಸವಿದ್ದಾರೆ. ಪತಿಯ ದೊಡ್ಡಪ್ಪನ ಮಗನಾದ ಸತೀಶ್, ಸಂತ್ರಸ್ತೆಗೆ ಹಲವು ತಿಂಗಳಿನಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದ. ಆ ಬಗ್ಗೆ ಆತ ತಪ್ಪೊಪ್ಪಿಕೊಂಡಿದ್ದಾನೆ’ ಎಂದರು.
ದೂರಿನ ವಿವರ: ‘ಅಕ್ಟೋಬರ್ 3ರಂದು ಬೆಳಿಗ್ಗೆ 11.30 ಗಂಟೆ ಸುಮಾರಿಗೆ ಮನೆಯೊಳಗೆ ನುಗ್ಗಿದ್ದ ಸತೀಶ್, ನನ್ನನ್ನು ತಬ್ಬಿಕೊಂಡಿದ್ದ. ಅದನ್ನು ವಿರೋಧಿಸುತ್ತಿದ್ದಂತೆ, ನನ್ನ ಬಟ್ಟೆಗಳನ್ನು ಬಿಚ್ಚಲು ಪ್ರಯತ್ನಿಸಿ ಬಲವಂತವಾಗಿ ಚುಂಬಿಸಿದ್ದ. ನನ್ನ ಒಳ ಉಡುಪು ಕದ್ದು ತನ್ನ ಬಳಿ ಇಟ್ಟುಕೊಂಡಿದ್ದ. ಜೊತೆಗೆ ನನ್ನ ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಬ್ಲ್ಯಾಕ್ಮೇಲ್ ಮಾಡಲಾರಂಭಿಸಿದ್ದ. ನ. 14 ಹಾಗೂ ಡಿ. 3ರಂದು ಸಹ ಮನೆಗೆ ನುಗ್ಗಿದ್ದ ಆತ, ಅತ್ಯಾಚಾರ ಮಾಡಲು ಯತ್ನಿಸಿದ್ದ. ಆತನ ವರ್ತನೆಯಿಂದ ನೊಂದು ಡಿ. 4 ರಂದು ನಿದ್ದೆ ಮಾತ್ರೆಗಳನ್ನು ನುಂಗಿದ್ದೆ. ಅತ್ತೆ ಹಾಗೂ ನಾದಿನಿಯೇ ನನ್ನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಬದುಕಿಸಿದ್ದಾರೆ’ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.