ಬೆಂಗಳೂರು: ಮೈಸೂರು ರಸ್ತೆಯ ಪಂತರಪಾಳ್ಯದ ಅಂಬೇಡ್ಕರ್ ನಗರದಲ್ಲಿ ಮಂಜುನಾಥ್ ಅಲಿಯಾಸ್ ರೋಮಿಯೊ(24) ಎಂಬುವರನ್ನು ಕೊಲೆ ಮಾಡಿದ್ದ 6 ಆರೋಪಿಗಳನ್ನು ಬ್ಯಾಟ ರಾಯನಪುರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಮಾಗಡಿ ಮುಖ್ಯ ರಸ್ತೆಯ ದೊಡ್ಡಗೊಲ್ಲರಹಟ್ಟಿಯ ಮುರುಗೇಶ್, ಶಶಿಕಲಾ, ವಿಜಯ್ ಕುಮಾರ್, ಸಚಿನ್, ಕೆ.ಜಿ.ಎಫ್ನ ಹರೀಶಸೂದನ್, ಲೂರ್ದು ಲೀನಸ್ ಬಂಧಿತರು. ಕೊಲೆಗೆ ಬಳಸಿದ್ದ ಮಾರಕಾಸ್ತ್ರಗಳನ್ನು ಆರೋಪಿಗಳಿಂದ ಜಪ್ತಿ ಮಾಡಲಾಗಿದೆ.
‘ಕೊಲೆಯಾದ ಮಂಜುನಾಥ್ ಅವರ ತಂಗಿಯನ್ನು ಆರೋಪಿ ಮುರುಗೇಶ್ ಚುಡಾಯಿಸಿದ್ದ. ಅದನ್ನು ಪ್ರಶ್ನಿಸಿದ್ದ ಮಂಜುನಾಥ್, ಆರೋಪಿಗೆ ಹೊಡೆದು ಬುದ್ಧಿ ಹೇಳಿದ್ದ. ಅದರಿಂದ ಸಿಟ್ಟಾಗಿದ್ದ ಆರೋಪಿ, ದ್ವೇಷವಿಟ್ಟುಕೊಂಡು ಸಹಚರರ ಮೂಲಕ ಕೊಲೆ ಮಾಡಿದ್ದ’ ಎಂದು ಪೊಲೀಸರು ಹೇಳಿದರು.
‘ಮಂಜುನಾಥ್, ಅಂಬೇಡ್ಕರ್ ನಗರದಲ್ಲಿರುವ ಮಾವನ ಮನೆಯಲ್ಲಿನ. 22ರಂದು ಮಲಗಿದ್ದರು. ಮಾರಕಾಸ್ತ್ರಗಳ ಸಮೇತ ಮನೆಗೆ ನುಗ್ಗಿದ್ದ ಆರೋಪಿಗಳು, ಕುತ್ತಿಗೆ ಹಾಗೂ ಎಡಗೈಗೆ ಹೊಡೆದು ಪರಾರಿಯಾಗಿದ್ದರು’ ಎಂದು ಅವರು ತಿಳಿಸಿದರು.