ಬೆಂಗಳೂರು: ಆಯುಧ ಪೂಜೆಯನ್ನು ನಗರದ ಜನರು ಸಂಭ್ರಮದಿಂದ ಆಚರಿಸಿದರು.
ಗುರುವಾರ ಬಹುತೇಕ ಕಚೇರಿಗಳು, ಕಂಪನಿಗಳಿಗೆ ರಜೆ ಇರುವುದರಿಂದ ಬುಧವಾರವೇ ಹಬ್ಬ ಆಚರಿಸಿ ಸಂಭ್ರಮಿಸಿದರು. ಅಂಗಡಿ ಮಾಲೀಕರು ಸಿಹಿ ಹಂಚುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು.
ಮನೆಗಳ ಎದುರು ಬೆಳಿಗ್ಗೆಯಿಂದಲೇ ರಂಗೋಲಿಗಳು ಕಂಗೊಳಿಸುತ್ತಿದ್ದವು. ಕಚೇರಿಗಳ ಎದುರು ವಾಹನಗಳನ್ನು ನಿಲ್ಲಿಸಿ, ಬೂದಗುಂಬಳ ಕಾಯಿ ಒಡೆದು ಪೂಜೆ ಮಾಡುವುದು ಎಲ್ಲೆಡೆ ಕಂಡುಬಂತು. ವಾಹನಗಳಿಗೆ ಹಾರ ಹಾಕಿ ಸಿಂಗರಿಸಲಾಗಿತ್ತು.
ಮಾರುಕಟ್ಟೆಯಲ್ಲಿ ಬೂದಗುಂಬಳ, ನಿಂಬೆಹಣ್ಣು ಹಾಗೂ ಬಾಳೆ ಸಸಿಗಳಿಗೆ ಬೇಡಿಕೆ ಹೆಚ್ಚಿತ್ತು. ರಸ್ತೆಬದಿಯಲ್ಲಿ ₹10ರಿಂದ ₹80ರವರೆಗೂ ಬಾಳೆಕಂಬಗಳನ್ನು ಮಾರುತ್ತಿದ್ದರು.
ಮಾವಿನ ಎಲೆ, ಹೂ, ಹಣ್ಣು ಖರೀದಿಯೂ ಜೋರಾಗಿತ್ತು. ಬಹುತೇಕ ದೇವಸ್ಥಾನಗಳಲ್ಲಿ ಸರತಿ ಸಾಲು ಹೆಚ್ಚಿತ್ತು. ಭಕ್ತರು ಬಾಳೆಹಣ್ಣು, ಅವಲಕ್ಕಿ ಬೆಲ್ಲದ ಪ್ರಸಾದ ಸವಿದರು.