ಬೆಂಗಳೂರು: ಆರ್ಥಿಕವಾಗಿ ದುರ್ಬಲ ರಾಗಿರುವವರು ಮದುವೆ ಮತ್ತಿತರ ಸಮಾರಂಭಗಳನ್ನು ನಡೆಸುವುದಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಪಾಲಿಕೆ ವತಿಯಿಂದ ನಂದಿನಿ ಬಡಾವಣೆಯಲ್ಲಿ ‘ಕೆಂಪೇಗೌಡ ಹೈಟೆಕ್ ಸಮುದಾಯ ಭವನ’ ನಿರ್ಮಿಸಲಾಗಿದೆ.
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಈ ಸಮುದಾಯ ಭವನವನ್ನು ಭಾನುವಾರ ಲೋಕಾರ್ಪಣೆ ಮಾಡಿದರು.
‘ಸಮುದಾಯ ಭವನದಲ್ಲಿ ಕಾರ್ಯ ಕ್ರಮ ಆಯೋಜಿಸಲು ದಿನಕ್ಕೆ ₹25,000 ಶುಲ್ಕ ನಿಗದಿ ಮಾಡಲಿದ್ದೇವೆ’ ಎಂದು ಪಾಲಿಕೆ ಸದಸ್ಯ ಕೆ.ವಿ.ರಾಜೇಂದ್ರ ಕುಮಾರ್ ಮಾಹಿತಿ ನೀಡಿದರು. ನಂದಿನಿ ಬಡಾವಣೆಯಲ್ಲಿ ವಿವಿಧ ಅಭಿವೃದ್ಧಿಪರ ಕಾಮಗಾರಿಗಳಿಗೂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.
₹50 ಲಕ್ಷ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಎ.ಬಿ.ವಾಜಪೇಯಿ ನಗರ ಆರೋಗ್ಯ ಕೇಂದ್ರದಲ್ಲಿ 8 ಹಾಸಿಗೆಗಳ ಸೌಲಭ್ಯವಿದೆ ಎಂದರು. ವೈದ್ಯರು ಹಾಗೂ ಸಿಬ್ಬಂದಿ ಸೇರಿದಂತೆ 9 ಮಂದಿ ಇಲ್ಲಿ ಸೇವೆಗೆ ಲಭ್ಯ.
ಬಡಾವಣೆಯ ಕೆಂಪೇಗೌಡ ಉದ್ಯಾನದ ಬಳಿ ಆಟೊ ನಿಲ್ದಾಣ ನಿರ್ಮಿಸಲಾಗಿದ್ದು, ಇದಕ್ಕೆ ಸಿದ್ಧಗಂಗಾ ಶ್ರೀಗಳ ಹೆಸರನ್ನಿಡಲಾಗಿದೆ.
₹12 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಘಟಕ ಹಾಗೂ ₹15 ಲಕ್ಷ ವೆಚ್ಚದಲ್ಲಿ ಬಸ್ ತಂಗುದಾಣ ನಿರ್ಮಿಸಲಾಗಿದೆ ಎಂದು ತಿಳಿಸ ಲಾಯಿತು.
ಡಾ.ರಾಜ್ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಈಜುಕೊಳ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿತು.
‘50 ಹಾಸಿಗೆಗಳ ಸೌಲಭ್ಯದ ಈ ಆಸ್ಪತ್ರೆ ನಿರ್ಮಾಣಕ್ಕೆ ₹5 ಕೋಟಿ ವೆಚ್ಚವಾಗಲಿದೆ. ವರ್ಷದೊಳಗೆ ಕಾಮ ಗಾರಿ ಪೂರ್ಣಗೊಳ್ಳಲಿದೆ’ ಎಂದು ರಾಜೇಂದ್ರ ಕುಮಾರ್ ಎಂ ತಿಳಿಸಿದರು.
ಶಾಸಕ ಕೆ.ಗೋಪಾಲಯ್ಯ, ‘ನಂದಿನಿ ಬಡಾವಣೆಯ ಈಜುಕೊಳದ ಕಾಮ ಗಾರಿ ಆದಷ್ಟು ಬೇಗ ಪೂರ್ಣಗೊಳ್ಳಲಿದೆ. ಕ್ಷೇತ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಸ್ಟೇಡಿಯಂ, ಬಿಬಿಎಂಪಿ ಕಾಂಪ್ಲೆಕ್ಸ್ ನಿರ್ಮಾಣವನ್ನೂ ಹಂತ ಹಂತವಾಗಿ ಕೈಗೆತ್ತಿಕೊಳ್ಳಲಿದ್ದೇವೆ’ ಎಂದರು.