ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸುರಕ್ಷಿತ ಪ್ಯಾಕೇಜ್ಡ್‌ ನೀರಿನ ಘಟಕ ಬಂದ್‌

ಐಎಸ್‌ಐ ಪ್ರಮಾಣಪತ್ರ ಪಡೆಯದ ಘಟಕಗಳ ವಿರುದ್ಧ ಆಹಾರ ಸುರಕ್ಷತೆ ಇಲಾಖೆ ಕಠಿಣ ಕ್ರಮ
Last Updated 15 ಜನವರಿ 2019, 19:42 IST
ಅಕ್ಷರ ಗಾತ್ರ

ಬೆಂಗಳೂರು: ಗುಣಮಟ್ಟ ಪ್ರಮಾಣೀಕರಣ ಪತ್ರ(ಐಎಸ್‌ಐ) ಪಡೆಯದೆಯೇ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ಯಾಕೇಜ್ಡ್‌ ಕುಡಿಯುವ ನೀರು ಪೂರೈಕೆ ಘಟಕಗಳಿಗೆ ಬೀಗ ಹಾಕಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮುಂದಾಗಿದೆ.

ಬ್ಯೂರೋ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್ಸ್‌(ಬಿಐಎಸ್‌)ನಿಂದ ಐಎಸ್‌ಐ ಪ್ರಮಾಣಪತ್ರ ಪಡೆಯದೆಯೇ ರಾಜ್ಯದಲ್ಲಿ ಸಾವಿರಾರು ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ಪ್ರಜಾಂದೋಲನ ಗ್ರಾಹಕರ ಹೋರಾಟ ಸಮಿತಿ ಅಧ್ಯಕ್ಷ ಬಿ.ಲೋಚನೇಶ್ ಹೂಗಾರ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌) ಸಲ್ಲಿಸಿ ಇಲಾಖೆಯ ಗಮನ ಸೆಳೆದಿದ್ದರು. ಇದರಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಸಾರ್ವಜನಿಕರ ಆರೋಗ್ಯ ಕಾಪಾಡಲು ಕಾರ್ಯಪ್ರವೃತ್ತರಾಗಿದ್ದಾರೆ.

ಪ್ರಮಾಣಪತ್ರ ಪಡೆಯದ ಘಟಕಗಳನ್ನು ಪತ್ತೆ ಹಚ್ಚಿರುವ ಇಲಾಖೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಅನುಸಾರ ಕಠಿಣ ಕ್ರಮ ಜರುಗಿಸಲು ಮುಂದಾಗಿದೆ. ಈ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಇಲಾಖೆಯ ಉಪ ಆಯುಕ್ತ (ಜಾಗೃತ ದಳ) ಇತ್ತೀಚೆಗೆ ಸೂಚಿಸಿದ್ದಾರೆ.

‘ಪ್ರತಿ ಘಟಕದಲ್ಲಿ ಸಂಸ್ಕರಣೆಯಾಗುವ ಜಲದಲ್ಲಿನ ಆಮ್ಲಾಂಶ(ಪಿಎಚ್‌ ಮೌಲ್ಯ), ಖನಿಜಾಂಶಗಳನ್ನು ಪರೀಕ್ಷಿಸಬೇಕು. ಅದರಲ್ಲಿನ ಹಾನಿಕಾರಕ ಅಂಶ ನಾಶಮಾಡುವ ಮತ್ತು ಕ್ಯಾಲ್ಸಿಯಂ, ಮ್ಯಾಗ್ನೆಷಿಯಂ ಅಂಶಗಳ ಕೊರತೆ ಇದ್ದರೆ, ಅವುಗಳನ್ನು ಸೇರ್ಪಡೆ ಮಾಡುವ ತಂತ್ರಜ್ಞಾನವನ್ನೇ(ಆರ್‌ಒ) ಬಳಸಬೇಕೆಂದು ಆಹಾರ ಸುರಕ್ಷೆ ಕಾಯ್ದೆಯೇ ಹೇಳುತ್ತದೆ.’

‘ಪ್ರತಿ ಘಟಕದಲ್ಲಿ ಪ್ರಯೋಗಾಲಯ ರೂಪಿಸಬೇಕು. ಅದರಲ್ಲಿ ಬಯೋ ಕೆಮಿಸ್ಟ್‌ ಮತ್ತು ಕೆಮಿಸ್ಟ್‌ ಸಿಬ್ಬಂದಿ ಇರಬೇಕು. ಪ್ರತಿ ಮೂರು ಗಂಟೆಗೊಮ್ಮೆ ನೀರಿನ ಗುಣಮಟ್ಟ ಪರೀಕ್ಷೆ ಮಾಡಬೇಕು. ಹಾಗೆಯೇಕಾಯ್ದೆ ಅನುಷ್ಠಾನ ಅಧಿಕಾರಿ ಪ್ರತಿ ಆರು ತಿಂಗಳಿಗೆ ಒಮ್ಮೆ ಘಟಕಕ್ಕೆ ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲಿಸಬೇಕು. ಕಾಯ್ದೆಯಂತೆ ಇದಾವ ಕೆಲಸಗಳು ನಡೆಯುತ್ತಿಲ್ಲ’ ಎಂಬ ದೂರುಗಳಿವೆ. ‘ಬಹುತೇಕರು ಭೂಗರ್ಭ ಇಲಾಖೆಯ ಅನುಮತಿಯಿಂದ ಕೊಳವೆ ಬಾವಿ ಕೊರೆಸಿ, ಆಹಾರ ಗುಣಮಟ್ಟ ಇಲಾಖೆಯಿಂದ ಮಾತ್ರ ನೀರನ್ನು ಪರೀಕ್ಷೆ ಮಾಡಿಸಿ ಘಟಕಗಳನ್ನು ನಡೆಸುತ್ತಿದ್ದಾರೆ’ ಎಂದು ಲೋಚನೇಶ್‌ ಆಪಾದಿಸಿದ್ದಾರೆ.

‘ಔಷಧಿಗಳನ್ನು ಹೊರತುಪಡಿಸಿ, ಜನ ಸೇವಿಸುವ ಪ್ರತಿಯೊಂದು ಪದಾರ್ಥ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಬರುತ್ತದೆ. ಹಾಗಾಗಿ ಪದಾರ್ಥಗಳನ್ನು ಕಾಯ್ದೆಯ ನಿಯಮಗಳಂತೆ ಪೂರೈಕೆ ಮಾಡಬೇಕು’ ಎಂದು ಅವರು ಹೇಳುತ್ತಾರೆ.

‘ಐಎಸ್‌ಐ ಪ್ರಮಾಣಪತ್ರ ಪಡೆಯಲು ಬಿಐಎಸ್‌ ರೂಪಿಸಿರುವ 54 ನಿಯಮಗಳನ್ನು ಪಾಲಿಸದೆ ಪ್ಯಾಕೇಜ್ಡ್‌ ನೀರು ಪೂರೈಸಿದರೆ, ಜನ ಉದರ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುತ್ತಾರೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ.

ಟ್ಯಾಂಕರ್‌ ನೀರಿಗೂ ಐಎಸ್‌ಐ?

ಆಹಾರ ಮತ್ತು ನೀರಿನಲ್ಲಿ ವಿಷಾಂಶ ಬೆರಕೆಯ ಪ್ರಕರಣಗಳು ರಾಜ್ಯದಲ್ಲಿ ಚರ್ಚೆ ಆಗುತ್ತಿರುವುದರಿಂದ ಟ್ಯಾಂಕರ್‌ ನೀರಿಗೂ ಐಎಸ್‌ಐ ಪ್ರಮಾಣಪತ್ರ ಕಡ್ಡಾಯ ಮಾಡುವಂತೆ ಬಿಐಎಸ್‌ಗೆ ಮನವಿ ಸಲ್ಲಿಸಲು ಇಲಾಖೆಯಲ್ಲಿ ಚರ್ಚೆ ನಡೆದಿದೆ.

‘ಬೇಸಿಗೆಯಲ್ಲಿ ಲಕ್ಷಾಂತರ ಜನ ಟ್ಯಾಂಕರ್‌ಗಳಿಂದ ಸರಬರಾಜು ಆಗುವ ನೀರು ಕುಡಿಯುತ್ತಾರೆ. ಅಶುದ್ಧ ನೀರಿನಿಂದ ಆರೋಗ್ಯದ ಮೇಲೆ ನಿಧಾನಗತಿಯಲ್ಲಿ ದುಷ್ಪರಿಣಾಮ ಉಂಟಾಗುತ್ತದೆ. ಹಾಗಾಗಿ ಬಿಐಎಸ್‌ ಮಾನದಂಡಗಳನ್ನು ಟ್ಯಾಂಕರ್‌ ನೀರಿಗೂ ಅನ್ವಯಿಸಬೇಕು. ಈ ನೀರನ್ನು ಕುಡಿಯಲು ಖರೀದಿಸುವ ಮುನ್ನ ಗಮನಿಸಬೇಕಾದ ಅಂಶಗಳ ಕುರಿತು ಜನರಲ್ಲಿ ಅರಿವು ಮೂಡಬೇಕು. ಅದಕ್ಕಾಗಿ ಮಾರ್ಚ್‌ ಆರಂಭದಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳಲು ಮಾತುಕತೆ ನಡೆಯುತ್ತಿದೆ’ ಎಂದು ಅಧಿಕಾರಿ ತಿಳಿಸಿದರು.

**

ಔಷಧಿಗಳನ್ನು ಹೊರತುಪಡಿಸಿ, ಜನರು ಸೇವಿಸುವ ಪ್ರತಿಯೊಂದು ಪದಾರ್ಥವು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಬರುತ್ತದೆ. ಹಾಗಾಗಿ ಪದಾರ್ಥಗಳನ್ನು ಕಾಯ್ದೆಯ ನಿಯಮಗಳಂತೆ ಪೂರೈಕೆ ಮಾಡಬೇಕು.
- ಬಿ.ಲೋಚನೇಶ್ ಹೂಗಾರ, ಅಧ್ಯಕ್ಷ, ಪ್ರಜಾಂದೋಲನ ಗ್ರಾಹಕರ ಹೋರಾಟ ಸಮಿತಿ

**

ಅಂಕಿ–ಅಂಶ
296 - ಐಎಸ್‌ಐ ಪ್ರಮಾಣಪತ್ರ ಪಡೆಯದ ನೀರಿನ ಘಟಕಗಳು
162 - ನಿಯಮ ಉಲ್ಲಂಘನೆಯಿಂದಾಗಿ ಮುಚ್ಚಿದ ಘಟಕಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT