ಹುಬ್ಬಳ್ಳಿ: ಅಖಿಲ ಭಾರತದ ಮಾಧ್ವ ಮಹಾಮಂಡಲ ಹಾಗೂ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜ ಆಯೋಜಿಸಿದ್ದ ಭಾಗವತ– ರಾಮಾಯಣ ಪ್ರವಚನ ಮಾಲಿಕೆ ಸಮಾರೋಪ ಸಮಾರಂಭದಲ್ಲಿ ಗುರುವಾರ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ತುಲಾಭಾರ ಮಾಡಲಾಯಿತು.
‘ನೀವಂತೂ ನನಗೆ ತುಲಾಭಾರ ಮಾಡಿದ್ದೀರ, ಆದರೆ ಜಗತ್ತನೇ ಧರಿಸಿರುವ ಭಗವಂತನ ತುಲಾಭಾರ ಮಾಡಲು ಸಾಧ್ಯವೇ ಇಲ್ಲ. ಹೃದಯದ ತಕ್ಕಡಿಯಲ್ಲಿ ಭಕ್ತಿಯ ತೂಗಿದರೆ ಜೀವನ ಸಾರ್ಥಕವಾಗುತ್ತದೆ. ಎಲ್ಲಕ್ಕಿಂತ ನಿಮ್ಮ ಪ್ರೀತಿಯ ಭಾರವೇ ದೊಡ್ಡದು. ಎಲ್ಲರ ಪುಣ್ಯದ ಭಾರ ಹೆಚ್ಚಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ’ ಎಂದು ಸ್ವಾಮೀಜಿ ಹೇಳಿದರು.
ಅಖಿಲ ಭಾರತ ಮಾಧ್ವ ಮಹಾಮಂಡಲದ ಹುಬ್ಬಳ್ಳಿ ಘಟಕದ ಅಧ್ಯಕ್ಷ ಶ್ರೀಪಾದ ಸಿಂಗನವಲ್ಲಿ, ಉಪಾಧ್ಯಕ್ಷ ಕೃಷ್ಣರಾಜ ಕೆಮ್ತೂರು, ಸದಸ್ಯ ಹಯವದನಾಚಾರ್ಯ, ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಶ್ರೀಪತಿ ಓಕುಡೆ ಇದ್ದರು. 52 ಸಾವಿರ ನಾಣ್ಯಗಳಿಂದ ಸ್ವಾಮೀಜಿ ಅವರ ತುಲಾಭಾರ ನಡೆಸಲಾಯಿತು.