ಬೆಂಗಳೂರು: ‘ಸಂಚಾರ ನಿಯಮ ಉಲ್ಲಂಘಿಸುವವರಿಂದ ಹಳೇ ದಂಡದ ಮೊತ್ತವನ್ನೇ ಸಂಗ್ರಹಿಸುವ ಬಗ್ಗೆ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ, ಮಾಧ್ಯಮಗಳಲ್ಲಿ ಬಂದ ವರದಿ ಬಗ್ಗೆ ಪ್ರತಿಕ್ರಿಯಿಸಲಾರೆ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.
ತಮ್ಮ ಕಚೇರಿಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸೆಪ್ಟೆಂಬರ್ 4ರಂದು ಹೊರಡಿಸಿರುವ ಅಧಿಸೂಚನೆಯಂತೆ ಸದ್ಯ ದಂಡ ಸಂಗ್ರಹಿಸಲಾಗುತ್ತಿದೆ. ಹೊಸ ಆದೇಶ ಬಂದರೆ ಪಾಲಿಸುತ್ತೇವೆ’ ಎಂದರು.
‘ದೇಶದಾದ್ಯಂತ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಸಂಚಾರ ನಿಯಮಗಳ ಬಗ್ಗೆ ಶಿಸ್ತು ಬರಲಿ ಹಾಗೂ ಸಾರ್ವಜನಿಕರ ಪ್ರಾಣ ಉಳಿಯಲಿ ಎಂಬ ಕಾರಣಕ್ಕೆ ದಂಡದ ಮೊತ್ತ ಹೆಚ್ಚಿಸಲಾಗಿದೆ. ಜನರು ನಿಯಮ ಪಾಲನೆ ಮಾಡಿದರೆ, ದಂಡ ಪಾವತಿಸಬೇಕಾದ ಅಗತ್ಯವೇ ಇರುವುದಿಲ್ಲ’ ಎಂದರು.
‘ವಾಹನ ಗಳ ತಪಾಸಣೆ ವೇಳೆ ಮಾನವೀಯತೆಯಿಂದ ವರ್ತಿಸುವಂತೆ ಸಂಚಾರ ಪೊಲೀಸರಿಗೆ ಸೂಚನೆ ನೀಡಲಾಗಿದೆ’ ಎಂದರು.
ಶಾಲೆ, ಕಚೇರಿಗಳಿಗೆ ನೋಟಿಸ್: ‘ಕೆಲ ಶಾಲಾ ಆಡಳಿತ ಮಂಡಳಿಯವರು ಹಾಗೂ ಖಾಸಗಿ ಕಂಪನಿಯವರು, ತಮ್ಮ ವಾಹನಗಳನ್ನು ಸಾರ್ವಜನಿಕ ರಸ್ತೆಗಳಲ್ಲೇ ನಿಲ್ಲಿಸುತ್ತಿದ್ದಾರೆ. ಅಂಥವರಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು, ಎಚ್ಚೆತ್ತುಕೊಳ್ಳದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಭಾಸ್ಕರ್ ರಾವ್ ಹೇಳಿದರು.
‘ಒಂದು ರಸ್ತೆಯಲ್ಲಿ ಅಸಂಖ್ಯ ಜನ ಓಡಾಡುತ್ತಾರೆ. ಕೆಲವೇ ಜನ, ಆ ರಸ್ತೆಯನ್ನು ಅತಿಕ್ರಮಿಸಿಕೊಂಡು ವಾಹನ ನಿಲ್ಲಿಸುವುದು ಕಾನೂನಿನ ಉಲ್ಲಂಘನೆ ಆಗುತ್ತದೆ’ ಎಂದು ಹೇಳಿದರು.