ಬೆಂಗಳೂರು: ನಿತ್ಯ ಸಂಚಾರ ದಟ್ಟಣೆಯ ನಿಯಂತ್ರಣ ಹಾಗೂ ಸಂಚಾರ ನಿಯಮ ಉಲ್ಲಂಘಿಸುವರ ಪತ್ತೆ ಕೆಲಸದಲ್ಲಿ ನಿರತರಾಗುವ ಪೊಲೀಸರು, ಭಾನುವಾರ ಮಾತ್ರ ಪೊರಕೆ ಹಾಗೂ ಗುದ್ದಲಿ ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು.
ಹೆಚ್ಚುವರಿ ಪೊಲೀಸ್ ಕಮಿಷನರ್ ಪಿ.ಹರಿಶೇಖರನ್ ಸೂಚನೆಯಂತೆ ಪೊಲೀಸರು, ತಮ್ಮ ಠಾಣೆ ಹಾಗೂ ಠಾಣೆ ವ್ಯಾಪ್ತಿಯ ಪ್ರಮುಖ ವೃತ್ತಗಳಲ್ಲಿದ್ದ ಸಂಚಾರ ಫಲಕಗಳನ್ನು ಸ್ವಚ್ಛಗೊಳಿಸಿದರು. ರಸ್ತೆಗಳಲ್ಲಿದ್ದ ಗುಂಡಿಗಳನ್ನು ಮುಚ್ಚಿದರು.
ನಗರದಲ್ಲಿ 44 ಸಂಚಾರ ಠಾಣೆಗಳಿದ್ದು, ಅದರ ಒಳ ಭಾಗ ಹಾಗೂ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಇನ್ಸ್ಪೆಕ್ಟರ್ನಿಂದ ಹಿಡಿದು ಕಾನ್ಸ್ಟೆಬಲ್ವರೆಗೆ ಪ್ರತಿಯೊಬ್ಬರೂ ಸ್ವಚ್ಛತಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.
ಅಪಘಾತ ಹಾಗೂ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ವಾಹನಗಳನ್ನು ಠಾಣೆ ಆವರಣದಲ್ಲೇ ನಿಲ್ಲಿಸಲಾಗಿದೆ. ವಾಹನ ಗಳಿರುವ ಭಾಗವೆಲ್ಲ ಗಲೀಜಾಗಿತ್ತು. ಅಂಥ ಜಾಗವನ್ನು ಸಹ ಶುಚಿಗೊಳಿಸಲಾಯಿತು. ಸ್ಥಳೀಯರು ಸಹ ಪೊಲೀಸರ ಕೆಲಸಕ್ಕೆ ಕೈ ಜೋಡಿಸಿದ್ದರು.