ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ ಕಚೇರಿ ಟೈಪಿಸ್ಟ್ ಎಸ್.ಜೆ. ಮೋಹನ್ ಕುಮಾರ್ ಅವರ ಜಾಮೀನು ಅರ್ಜಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿತು.
ಬಂಧಿತ ಆರೋಪಿ ಮೋಹನ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು. ಪತ್ನಿ ಒಡವೆಗಳನ್ನು ಅಡವಿಟ್ಟು ಹಣ ತಂದಿರುವುದಾಗಿ ಮೋಹನ್ ಕುಮಾರ್ ಹೇಳಿಕೆ ನೀಡಿದ್ದರು. ಅದನ್ನು ಸಾಬೀತುಪಡಿಸಲು ಅವರು ವಿಫಲರಾದರು.
ಅಲ್ಲದೆ, ಸರ್ಕಾರಿ ಕಚೇರಿಗಳಿಗೆ ನೌಕರರು ಹಣ ತಂದಾಗ ಅಧಿಕೃತವಾಗಿ ಅದನ್ನು ದಾಖಲಿಸಬೇಕು. ಆದರೆ, ಆರೋಪಿ ಆ ಕೆಲಸ ಮಾಡಿರಲಿಲ್ಲ. ಇವೆರಡೂ ಕಾರಣಗಳ ಮೇಲೆ ಜಾಮೀನು ನಿರಾಕರಿಸಲಾಗಿದೆ.
ಈ ಮಧ್ಯೆ, ಮೋಹನ್ ಕುಮಾರ್ಗೆ ಹಣ ನೀಡಿದ್ದರೆನ್ನಲಾದ ಗುತ್ತಿಗೆದಾರ ಅನಂತು ನಿರೀಕ್ಷಣಾ ಜಾಮೀನಿಗೆ ಇದೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚೆಗೆ ಮೋಹನ್ ಕುಮಾರ್ ₹ 25.76 ಲಕ್ಷವನ್ನು ಬ್ಯಾಗಿನಲ್ಲಿ ಒಯ್ಯುತ್ತಿದ್ದಾಗ ಭದ್ರತಾ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದರು.