ರಾಜರಾಜೇಶ್ವರಿನಗರ: ಪಂಚಾಯಿತಿ ಕೇಂದ್ರ ಹಾಗೂ ವಾರ್ಡ್ ವ್ಯಾಪ್ತಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು ಶೀಘ್ರದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಉಲ್ಲಾಳು ಮಂಗನಹಳ್ಳಿ ಕ್ರಾಸ್ನಲ್ಲಿ ಕುಡಿಯುವ ನೀರು ಸರಬರಾಜು ಯೋಜನೆ, ಅಂಗನವಾಡಿ ಕಟ್ಟಡ ಉದ್ಘಾಟನೆ, ಸರ್.ಎಂ.ವಿಶ್ವೇಶ್ವರಯ್ಯ ಐದನೇ ಬಡಾವಣೆಯಲ್ಲಿ ಕುಡಿಯುವ ನೀರು ಸರಬರಾಜು ಯೋಜನೆ ಮತ್ತು ಉಲ್ಲಾಳು ಉಪನಗರದಲ್ಲಿ ₹1 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಪ್ರಾಥಮಿಕ ಆರೋಗ್ಯ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಉಲ್ಲಾಳು ಉಪನಗರದಲ್ಲಿ ನಿರ್ಮಿಸಲಾಗುತ್ತಿರುವ 20 ಹಾಸಿಗೆಗಳ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡದಲ್ಲಿ ರೋಗಿಗಳ ತಪಾಸಣಾ ಕೊಠಡಿ, ಚಿಕಿತ್ಸಾ ಕೊಠಡಿ, ಶೌಚಾಲಯ, ಪ್ರಯೋಗ ಶಾಲೆ, ವಿಶ್ರಾಂತಿ ಗೃಹ, ಶುಶ್ರೂಷಕಿಯ ಕೊಠಡಿ, ಕ್ಷ-ಕಿರಣ ಕೊಠಡಿ, ವೈದ್ಯರ ಕೊಠಡಿ, ಮಹಿಳಾ ಪರೀಕ್ಷಾ ಕೊಠಡಿ ಇರಲಿವೆ ಎಂದರು.