ರಾಜರಾಜೇಶ್ವರಿನಗರ: ವಿಶ್ವೇಶ್ವರಯ್ಯ ಬಡಾವಣೆ, ಮುದ್ದನಪಾಳ್ಯ, ಗಿಡದಕೋನೇನಹಳ್ಳಿ, ಮಲ್ಲತಹಳ್ಳಿ ಬಡಾವಣೆಗಳಿಂದ ಗಾಂಧಿನಗರ ಕೆರೆಗೆ ಒಳಚರಂಡಿ ನೀರು ಹರಿದು ಬರುತ್ತಿದ್ದು, ಅದನ್ನು ತಪ್ಪಿಸಲು ₹2.50 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದರು.
ನಾಗದೇವನಹಳ್ಳಿ, ಉಲ್ಲಾಳು, ವಿನಾಯಕನಗರ, ಅಂಚೆಕೇರಿ, ಉಲ್ಲಾಳು ಉಪನಗರ, ವಿಶ್ವೇಶ್ವರಯ್ಯ ಬಡಾವಣೆ ಹಾಗೂ ವಿವಿಧ ಬಡಾವಣೆಗಳಲ್ಲಿ ಉಚಿತ ಟ್ಯಾಂಕರ್ ನೀರು ಸರಬರಾಜು ಮತ್ತು ಕೊಳವೆಬಾವಿ ನೀರು ಸರಬರಾಜು ಯೋಜನೆ ಉದ್ಘಾಟನೆ ಹಾಗೂ ಕೊಳವೆಬಾವಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಉಲ್ಲಾಳು ಮುಖ್ಯರಸ್ತೆಯ ಸರ್ಕಲ್ನ ಹೊರವರ್ತುಲ ರಸ್ತೆ, ಜ್ಞಾನಭಾರತಿ ಕ್ವಾಟ್ರಸ್ನಿಂದ, ಮರಿಯಪ್ಪನಪಾಳ್ಯ, ನಾಗದೇವನಹಳ್ಳಿ, ಶಿರ್ಕೆ, ಕೆಂಗೇರಿ ಉಪನಗರ, ಮಾರ್ಗವಾಗಿ ಮೈಸೂರು ರಸ್ತೆವರೆಗೆ ₹ 48 ಕೋಟಿ ವೆಚ್ಚದಲ್ಲಿ ವೈಟ್ ಟಾಪಿಂಗ್ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದರು.
ಬಿಡಿಎ ವತಿಯಿಂದ ಉಲ್ಲಾಳುನಿಂದ ಮೈಸೂರು ರಸ್ತೆ ಸಂಪರ್ಕಿಸಲು ನೇರ ಸಂಪರ್ಕ ರಸ್ತೆ, ರೈಲ್ವೆ ಬ್ರಿಡ್ಜ್ ನಿರ್ಮಿಸಲು ನೀಲನಕ್ಷೆ ತಯಾರಿಸಲಾಗಿದೆ ಎಂದು ಹೇಳಿದರು.