ಬೆಂಗಳೂರು: ಮಹಿಳೆಯೊಬ್ಬರಿಗೆ ರೈಲ್ವೆ ಅಧಿಕಾರಿಗಳು ಸ್ಯಾನಿಟರಿ ನ್ಯಾಪ್ಕಿನ್ ಮತ್ತು ಔಷಧ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.
ಟ್ವಿಟರ್ ಮೂಲಕ ನೀಡಿದ ಕೋರಿಕೆಗೆ ರೈಲ್ವೆ ಇಲಾಖೆ ತಕ್ಷಣವೇ ಸ್ಪಂದಿಸಿದೆ.
ಕಲಬುರ್ಗಿಯವರಾದ ವಿಶಾಲ್ ಖಾನಾಪುರೆ ಎಂಬುವವರು ತಮ್ಮ ಗೆಳತಿಯೊಂದಿಗೆ ಬೆಂಗಳೂರಿನಿಂದ ಹೊಸಪೇಟೆ ಕಡೆಗೆ ಹೊರಟಿದ್ದರು. ಮಾರ್ಗ ಮಧ್ಯೆ ಗೆಳತಿಗೆ ಋತುಸ್ರಾವದ ಸಮಸ್ಯೆ ಕಾಡಿತು. ಖಾನಾಪುರೆ ಅವರು ಭಾರತೀಯ ರೈಲ್ವೆಯ ಟ್ವಿಟರ್ ಖಾತೆ ಮೂಲಕ ಸಮಸ್ಯೆ ವಿವರಿಸಿದರು. ರೈಲ್ವೆ ಸೇವಾ ವಿಭಾಗಕ್ಕೆ ಕರೆ ಮಾಡಿ ತಿಳಿಸಿದರು.
ರೈಲು ಅರಸೀಕೆರೆ ನಿಲ್ದಾಣ ಸಮೀಪಿಸುತ್ತಿದ್ದಂತೆಯೇ ಅಲ್ಲಿ ಸಿದ್ಧರಾಗಿದ್ದ ಇಲಾಖೆಯ ಮೈಸೂರು ವಿಭಾಗದ ಅಧಿಕಾರಿಗಳು ಮಹಿಳೆಗೆ ಪ್ಯಾಡ್ ಮತ್ತು ಅಗತ್ಯ ಔಷಧ ಪೂರೈಸಿದರು.
ತ್ವರಿತ ಪ್ರತಿಕ್ರಿಯೆ ಸಿಕ್ಕಿದ್ದಕ್ಕೆ ಖಾನಾಪುರೆ ಅವರು ಇಲಾಖೆಗೆ ಕೃತಜ್ಞತೆ ಅರ್ಪಿಸಿದರು.