ಬೆಂಗಳೂರು: ‘ಕಳೆದ ಮೂರು ದಶಕಗಳಲ್ಲಿ ಯಾವ ಸರ್ಕಾರಗಳೂ ಮಾಡದ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರಕೇವಲ ಐದು ವರ್ಷಗಳಲ್ಲಿ ಮಾಡಿದೆ’ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಎನ್ಡಿಎ ಆಡಳಿತ ಅವಧಿಯಲ್ಲಿಭಾರತ ಆರ್ಥಿಕವಾಗಿ ಬಲಿಷ್ಠವಾಗಿದ್ದು,ಬಡವರ ಹಾಗೂ ರೈತರ ಸ್ಥಿತಿ ಬದಲಾಗಿದೆ. ಇದು ಮೋದಿ ಮತ್ತು ಬಿಜೆಪಿಯ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ’ ಎಂದು ತಿಳಿಸಿದರು.
‘ದೇಶದ ಶೇ 75ರಿಂದ 80ರಷ್ಟು ಜನ ಮೋದಿಯವರು ಮತ್ತೆಪ್ರಧಾನಿಯಾಗಬೇಕು ಎಂದು ಬಯಸುತ್ತಿದ್ದಾರೆ. ಅವರು ಮತ್ತೆ ಪ್ರಧಾನಿಯಾಗುವುದು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ದೇಶದಲ್ಲಿ ಶೇ 65ರಷ್ಟು ಜನ ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ. ಆದರೆವಿರೋಧ ಪಕ್ಷಗಳು ಕೇವಲ ಸಂಘಟಿತ ವಲಯದ ಉದ್ಯೋಗಿಗಳ ದತ್ತಾಂಶವನ್ನು ಇಟ್ಟುಕೊಂಡು, ನಿರುದ್ಯೋಗದ ಬಗ್ಗೆ ಮಾತನಾಡುತ್ತಿವೆ’ ಎಂದು ಆರೋಪಿಸಿದರು.
‘ಸಾಲಮನ್ನಾ ರೈತರ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವಲ್ಲ. ಆದ್ದರಿಂದ ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡಿಲ್ಲ. ಆದರೆ, ಅವರ ಆದಾಯ ದ್ವಿಗುಣಗೊಳಿಸಲು ಹಲವಾರು ಕಾರ್ಯಕ್ರಮಗಳನ್ನು ಪರಿಚಯಿಸಿದೆ’ ಎಂದು ಅವರು ಹೇಳಿದರು.