ಪೀಣ್ಯದಾಸರಹಳ್ಳಿ: 'ಗುರಿ ಇಲ್ಲದವನು ಏನೂ ಸಾಧಿಸಲಾರ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಗುರಿ ಮುಟ್ಟುವುದು ಸುಲಭ' ಎಂದು ಕರ್ನಾಟಕ ಮಾನವ ಹಕ್ಕುಗಳ ಜನ ಜಾಗೃತಿ ಸಮಿತಿಯ ಅಧ್ಯಕ್ಷ ಜ್ಞಾನಪ್ರಕಾಶ್ ಹೇಳಿದರು.
ಎಂ.ಎಸ್.ರಾಮಯ್ಯ ಬಡಾವಣೆಯ ಸರ್ವೋದಯ ಕಲಾನಿಕೇತನ ಸಮಿತಿ ಹಾಗೂ ಎನ್ಕೆಕೆ ಡ್ಯಾನ್ಸ್ ಅಕಾಡೆಮಿಯ 'ಎನ್ಕೆಕೆ ಹಬ್ಬ-2019' ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಮನುಷ್ಯ ಏನನ್ನೇ ಕಂಡುಹಿಡಿದರೂ ಆಯಸ್ಸನ್ನು ಕಂಡುಹಿಡಿಯಲಿಲ್ಲ. ಅದಕ್ಕಾಗಿ ನಮ್ಮ ಆರೋಗ್ಯವನ್ನು ನಾವು ನೃತ್ಯ, ಯೋಗ, ಧ್ಯಾನಗಳಿಂದ ವೃದ್ಧಿಸಿಕೊಳ್ಳಬೇಕು' ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಕಿರಣ್ 'ನಮ್ಮ ಈ ನೃತ್ಯ ಅಕಾಡೆಮಿಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳಿಂದ ಇಂದು ಕಿರುತೆರೆ, ಸಿನಿಮಾ ರಂಗದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಇತರರಿಗೂ ಮಾದರಿಯಾಗುತ್ತಿದ್ದಾರೆ' ಎಂದರು.
ಸಮಾರಂಭದಲ್ಲಿ ಕಲಾನಿಕೇತನ ಸಂಸ್ಥಾಪಕಿ ಪುಷ್ಪಲತಾ ರಾಮಚಂದ್ರ, ಚಿತ್ರನಟಿ ಕಲ್ಪನಾ, ಕನ್ನಡ ಸಾಹಿತ್ಯ ಪರಿಷತ್ ದಾಸರಹಳ್ಳಿ ಘಟಕದ ಅಧ್ಯಕ್ಷ ವೈಬಿಎಚ್ ಜಯದೇವ್, ಗೋವಿಂದರಾಜು, ವಿನೋದ್ಗೌಡ ಇದ್ದರು.ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.