ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎರಡು ತಿಂಗಳ ಸಮಯಾವಕಾಶ ಕೇಳಿದರು.
ಸದಾಶಿವ ಆಯೋಗದ ವರದಿ ಕುರಿತು ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕೃಷ್ಣಾದಲ್ಲಿ ಶುಕ್ರವಾರ ಜನಪ್ರತಿನಿಧಿಗಳು ಮತ್ತು ಹೋರಾಟಗಾರರ ಜತೆ ಅವರು ಸಭೆ ನಡೆಸಿದರು.
ವರದಿಯ ಅಧ್ಯಯನದ ಬಳಿಕ ಶಿಫಾರಸುಗಳ ಜಾರಿಯ ಪರ– ವಿರೋಧ ಇರುವ ಎಲ್ಲ ಸಂಘಟನೆಗಳ ಜತೆಗೂ ಮಾತುಕತೆ ನಡೆಸಲಾಗು ವುದು. ಎಲ್ಲರನ್ನೂ ಒಪ್ಪಿಸಿದ ಬಳಿಕವೇ ಒಂದು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕುಮಾರಸ್ವಾಮಿ ಸಭೆಯಲ್ಲಿ ಭರವಸೆ ನೀಡಿದರು ಎಂದು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ತಿಳಿಸಿದರು.
ಈ ವಿಷಯವನ್ನು ಸಂಪುಟ ಸಭೆಗೆ ತರುವುದಕ್ಕೆ ಮುನ್ನ ಸರ್ವ ಪಕ್ಷಗಳ ಮುಖಂಡರ ಸಭೆಯನ್ನೂ ಕರೆದು ಚರ್ಚಿಸಲಾಗುವುದು. ಆ ಸಭೆಯಲ್ಲಿ
ಒಮ್ಮತ ಮೂಡಿಸುವ ಮೂಲಕವೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಬಳಿಕ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಇವಿಷ್ಟೂ ಕೆಲಸಕ್ಕೆ ಎರಡು ತಿಂಗಳು ಬೇಕಾಗುತ್ತದೆ ಎಂದೂ ಭರವಸೆ ನೀಡಿದರು.
ಮುಖ್ಯಮಂತ್ರಿ ಅವರ ಭರವಸೆಯಿಂದ ಹೋರಾಟದಲ್ಲಿ ತೊಡಗಿರುವ ಸಂಘಟನೆಗಳ ಮುಖಂಡರು ಸಮಾಧಾನಗೊಂಡಿದ್ದು, ಪ್ರತಿಭಟನೆ ಕೈ ಬಿಡುವುದಾಗಿ ತಿಳಿಸಿದ್ದಾರೆ. ಸಭೆಯಲ್ಲಿ ಮುಖ್ಯಮಂತ್ರಿ ಎಲ್ಲ ಮುಖಂಡರು ಮತ್ತು ಸಂಘಟನೆಗಳ ಅಹವಾಲುಗಳನ್ನು ಆಲಿಸಿದರು ಎಂದು ಹನುಮಂತಯ್ಯ ಹೇಳಿದರು.
ಸಭೆಯಲ್ಲಿ ಸಮಾಜಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ವಿವಿಧ ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.