ಬೆಂಗಳೂರು: ‘ಬಯೋಮೆಟ್ರಿಕ್ ಮತ್ತು ಆಧಾರ್ ಕಾರ್ಡ್ ತೊಂದರೆಯಿಂದ ನವೆಂಬರ್ ತಿಂಗಳ ಸಂಬಳ ಬಂದಿಲ್ಲ. ಇಎಸ್ಐ ಮತ್ತು ಪಿಎಫ್ ಸಹ ಸಿಕ್ಕಿಲ್ಲ. ಜನಸಾಮಾನ್ಯರಂತೆ ಬದುಕಲು ನಮಗೂ ಅವಕಾಶ ಮಾಡಿಕೊಡಿ' ಎಂದು ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತ ಎಚ್.ಬಾಲಶೇಖರ್ ಅವರಿಗೆ ಪೌರಕಾರ್ಮಿಕರು ಮನವಿ ಮಾಡಿದರು.
‘ಮನೆಯಲ್ಲಿ ಪುಟ್ಟ ಮಕ್ಕಳನ್ನು ಬಿಟ್ಟು ಹಲವಾರು ಕಿಲೋಮೀಟರ್ ನಡೆದು ಬೆಳಿಗ್ಗೆ 6ಕ್ಕೆ ಕೆಲಸಕ್ಕೆ ಹಾಜರಾಗುತ್ತೇವೆ. ಕಾಯಿಲೆ ಬಂದರೆ ಚಿಕಿತ್ಸೆಗಾಗಿ ಇ.ಎಸ್.ಐ ಕಾರ್ಡ್ ಕೊಡಿಸಿ’ ಎಂದು ಕೆಲವರು ಕೇಳಿಕೊಂಡರು.
ಬಾಲಶೇಖರ್ ಮಾತನಾಡಿ, ‘ಕಾಲಕಾಲಕ್ಕೆ ಸಂಬಳವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಿಸುತ್ತೇನೆ. ಕೆಲವು ಪೌರಕಾರ್ಮಿಕರಿಗೆ ಆಧಾರ್ ಕಾರ್ಡ್ ಇಲ್ಲದ ಕಾರಣ ಕಾರ್ಡ್ ಮಾಡಿಸಿ ಪಿ.ಎಫ್, ಇ.ಎಸ್.ಐ. ಸೌಲಭ್ಯ ದೊರಕಿಸಿಕೊಡುತ್ತೇನೆ’ ಎಂದು ಭರವಸೆ ನೀಡಿದರು.
‘ವಾರ್ಡ್ ಎಂಜಿನಿಯರ್ ವಾರಕ್ಕೊಮ್ಮೆ ಪೌರಕಾರ್ಮಿಕರ ಜೊತೆ ಚಹಾ ಸೇವನೆ ಮಾಡಿ ಅವರ ವಿಶ್ವಾಸ ಗಳಿಸಿ ನಗರದ ಸ್ವಚ್ಚತೆಗೆ ಬಳಸಿಕೊಳ್ಳಬೇಕು. ನಿಜವಾದ ಸಮಾಜದ ಸೇವಕರು ಪೌರಕಾರ್ಮಿಕರು. ಅವರನ್ನು ಸಹೋದರ ಭಾವನೆಯಿಂದ ಕಾಣಬೇಕು’ ಎಂದು ಕಿವಿಮಾತು ಹೇಳಿದರು.
ರಾಜರಾಜೇಶ್ವರಿನಗರ, ಯಶವಂತಪುರ ಕ್ಷೇತ್ರದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗಳಾದ ಮಧು, ಗುರು, ಕುಮಾರ್ ಪ್ರತಿಕ್ರಿಯಿಸಿ, ‘ಇಲ್ಲಿ ಕೆಲವರಿಗೆ ಮಾತ್ರ ತಾಂತ್ರಿಕ ಸಮಸ್ಯೆಯಿದೆ. ಆದಿತ್ಯ ಏಜೆನ್ಸಿ ಮೂಲಕ ಇ.ಎಸ್.ಐ, ಪಿ.ಎಫ್ ದೊರಕಿಸಿಕೊಡಲು ಗುತ್ತಿಗೆ ನೀಡಲಾಗಿದೆ’ ಎಂದರು.