ಬೆಂಗಳೂರು: ‘104 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಲಕ ಬಾಹ್ಯಕಾಶ ಕ್ಷೇತ್ರದಲ್ಲಿ ಭಾರತವು ಅಪ್ರತಿಮ ಸಾಧನೆ ತೋರಿದೆ’ ಎಂದು ವಿಜ್ಞಾನಿ ಎ.ಎಸ್.ಕಿರಣ್ ಕುಮಾರ್ ಹೇಳಿದರು
ಡಾ.ಬಿ.ಆರ್.ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ 5ನೇ ವರ್ಷದ ‘ರಾಷ್ಟ್ರೀಯ ಮಟ್ಟದ ತಾಂತ್ರಿಕ ವಸ್ತು ಪ್ರದರ್ಶನ’ ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದ ಸಾಮಾಜಿಕ ಹಾಗೂ ಆರ್ಥಿಕ ಚಟುವಟಿಕೆಗಳನ್ನು ಉಪಗ್ರಹಗಳು ನಿಯಂತ್ರಿಸುತ್ತಿದೆ. ಈ ತಂತ್ರಜ್ಞಾನ ಮೀನುಗಳು ಸಿಗುವ ಸ್ಥಳದ ಮಾಹಿತಿ ನೀಡುವ ಮೂಲಕ ಮೀನುಗಾರರ ಶ್ರಮವನ್ನು ಕಡಿಮೆ ಮಾಡಿದೆ. ಮಳೆ–ಮಾರುತಗಳ ಚಲನೆ, ನೈಸರ್ಗಿಕ ವಿಕೋಪಗಳ ಮಾಹಿತಿ ನೀಡುವ ಮೂಲಕ ಜೀವಹಾನಿ ತಪ್ಪಿಸುತ್ತಿದೆ’ ಎಂದು ಅವರು ತಿಳಿಸಿದರು.
‘ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ಪ್ರಯೋಗಶೀಲ ಪ್ರವೃತ್ತಿಯನ್ನು ಜಾಗೃತಗೊಳಿಸಲು ತಾಂತ್ರಿಕ ವಸ್ತು ಪ್ರದರ್ಶನದಂಥ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ’ ಎಂದು ಪಿವಿಪಿ ಟ್ರಸ್ಟ್ ಅಧ್ಯಕ್ಷ ಮರಿಸ್ವಾಮಿ ಹೇಳಿದರು.