ಬೆಂಗಳೂರು: ನಗರಕ್ಕೆ ಪ್ರತ್ಯೇಕವಾದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಸ್ಥಾಪಿಸುವ ಸಂಬಂಧ ನಗರದ ಪೊಲೀಸ್ ಅಧಿಕಾರಿಗಳು, ಗೃಹ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದಾರೆ.
ಕಮಿಷನರೇಟ್ ವ್ಯಾಪ್ತಿಯ ಅಧಿಕಾರಿಗಳ ಜೊತೆ ಇತ್ತೀಚೆಗೆ ಸಭೆ ನಡೆಸಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಎಟಿಎಸ್ ಸ್ಥಾಪನೆ ಬಗ್ಗೆ ಪ್ರಸ್ತಾಪಿಸಿದ್ದರು. ಅದರಂತೆ ಅಧಿಕಾರಿಗಳು, ಪ್ರಸ್ತಾವವೊಂದನ್ನು ಸಿದ್ಧಪಡಿಸಿ ಗೃಹ ಇಲಾಖೆಗೆ ಕಳುಹಿಸಿದ್ದಾರೆ.
‘ಹೊರ ರಾಜ್ಯಗಳ ಕೆಲ ನಗರಗಳಲ್ಲಿ ಈಗಾಗಲೇ ಎಟಿಎಸ್ ಇದೆ. ಅದಕ್ಕೆ ತನ್ನದೇ ಆದ ನುರಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೇಕು. ಪ್ರತ್ಯೇಕ ಕಚೇರಿ ಹಾಗೂ ಇತರೆ ಆಧುನಿಕ ತಂತ್ರಜ್ಞಾನಗಳ ಸವಲತ್ತುಗಳು ಬೇಕು. ಈ ಎಲ್ಲ ಅಂಶಗಳನ್ನು ಒಳಗೊಂಡ ಪ್ರಸ್ತಾವವನ್ನು ಗೃಹ ಇಲಾಖೆಗೆ ಸಲ್ಲಿಸಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.