ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣಕ್ಕೆ ಹೊಂದಿಕೊಂಡಿರುವ ಓಕಳಿಪುರದ ಜಾಗದಲ್ಲಿದ್ದ ಶನೈಶ್ವರ ದೇವಸ್ಥಾನವನ್ನು ತೆರವು ಮಾಡಿದ್ದನ್ನು ವಿರೋಧಿಸಿ ಭಕ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಪ್ರತಿ ಶನಿವಾರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತಿತ್ತು. ಹೀಗಾಗಿ ಭಕ್ತರು ಪೂಜೆಗೆ ಬಂದಿದ್ದರು. ಆದರೆ, ದೇವಸ್ಥಾನದಲ್ಲಿ ದೇವರ ಮೂರ್ತಿ ಇರಲಿಲ್ಲ. ಕೆಲ ದಿನಗಳ ಹಿಂದೆಯೇ ಅದನ್ನು ತೆರವು ಮಾಡಲಾಗಿತ್ತು.
‘ಓಕಳಿಪುರ ಬಳಿ ಕಾರಿಡಾರ್ ನಿರ್ಮಾಣಕ್ಕಾಗಿ ಹಿಂದೊಮ್ಮೆ ದೇವಸ್ಥಾನವನ್ನು ಸ್ಥಳಾಂತರಗೊಳಿಸಲಾಗಿತ್ತು. ಈಗ ಮತ್ತೊಮ್ಮೆ ಅದೇ ದೇವಸ್ಥಾನವನ್ನು ತೆರವು ಮಾಡುವ ಮೂಲಕ ಭಕ್ತರ ಭಾವನೆಗೆ ಧಕ್ಕೆ ತರಲಾಗಿದೆ’ ಎಂದು ಪ್ರತಿಭಟನಕಾರರು ದೂರಿದರು.
‘ಹಲವು ವರ್ಷಗಳಿಂದ ಈ ಜಾಗದಲ್ಲಿ ದೇವಸ್ಥಾನವಿತ್ತು. ಇದನ್ನು ತೆರವು ಮಾಡಿದವರ ವಿರುದ್ಧ ಹೋರಾಟ ನಡೆಸುತ್ತೇವೆ’ ಎಂದರು.