ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕಿನ ಶಿವಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಘಂಟೆಹೊಸಹಳ್ಳಿ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಯನ್ನು ಮುಚ್ಚದೆ ಹಾಗೆಯೇ ಬಿಡಲಾಗಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿಯೇ ಈ ತೆರೆದ ಕೊಳವೆ ಬಾವಿ ಇದೆ. ಇದೇ ರಸ್ತೆಯಲ್ಲಿ ದಿನ ನಿತ್ಯ ಶಾಲಾ ಹಾಗೂ ಅಂಗನವಾಡಿ ಮಕ್ಕಳು ಓಡಾಡುತ್ತಾರೆ.
‘ಅನಾಹುತ ಸಂಭವಿಸದಂತೆ ತಡೆಯಲು ಅದರ ಮೇಲೆ ಕಲ್ಲನ್ನಿಟ್ಟಿದ್ದೆವು. ಆದರೆ, ಕಿಡಿಗೇಡಿಗಳು ಕೆಡವಿದ್ದಾರೆ. ಈಗಲಾದರೂ ಪಂಚಾಯಿತಿಯವರು ಗಮನಹರಿಸಿ ಮುಚ್ಚಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಪಂಚಾಯಿತಿ ಅಧ್ಯಕ್ಷ ಹನುಮಂತರಾಜು ಪ್ರತಿಕ್ರಿಯಿಸಿ, ‘ಈ ವಿಷಯ ನಮ್ಮ ಗಮನಕ್ಕೆ ಬಂದಿರಲಿಲ್ಲ. ಕೂಡಲೇ ಅದನ್ನು ಮುಚ್ಚಿಸಲಾಗುವುದು’ ಎಂದರು.