ಬೆಂಗಳೂರು: ‘ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮಿಗಳ ತ್ರಿವಿಧ ದಾಸೋಹ ಇಡೀ ಜಗತ್ತಿಗೆ ಮಾದರಿ. ನಮ್ಮೆಲ್ಲ ಮಠ ಪರಂಪರೆಗೆ ಅವರು ಮಾದರಿ’ ಎಂದು ವಿಭೂತಿಪುರ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಮಠದಲ್ಲಿ 183ನೇ ಮಾಸಿಕ ಧರ್ಮ ಚಿಂತನದ ಅಂಗವಾಗಿ ಹಮ್ಮಿಕೊಂಡಿದ್ದ ‘ಸಿದ್ದಗಂಗೆ ಶ್ರೀಗಳ ನೆನಹು’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ವೀರಶೈವ ಲಿಂಗಾಯತ ಸಮಾಜಕ್ಕೆ ಮಾತ್ರ ತಿಳಿದಿದ್ದ ಇಷ್ಟಲಿಂಗ ಪೂಜೆಯ ಮಹತ್ವ ಜಾಗತಿಕವಾಗಿ ಪರಿಚಯವಾಗಿದ್ದು ಶ್ರೀಗಳಿಂದ. ತಮ್ಮ ಅನಾರೋಗ್ಯದ ದಿನಗಳಲ್ಲಿ ಆಸ್ಪತ್ರೆಯಲ್ಲಿದ್ದಾಗಲೂ ಇಷ್ಟಲಿಂಗ ಪೂಜೆ, ವಿಭೂತಿ ಧಾರಣೆ, ಪಂಚಾಕ್ಷರಿ ಮಂತ್ರದ ಜಪವನ್ನು ತಪ್ಪಿಸದ ಅವರ ಬದ್ಧತೆ ಅನುಕರಣಾರ್ಹ’ ಎಂದರು.
ಲೇಖಕ ಪ್ರಶಾಂತ ರಿಪ್ಪನ್ಪೇಟೆ, ಕೀರ್ತನ ಕೇಸರಿ ಆರ್.ಜ್ಞಾನಮೂರ್ತಿ, ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಬಿ.ಎನ್.ಭಟ್ರಾಚಾರ್, ನಿವೃತ್ತ ಉಪ ಆಯುಕ್ತ ಎಚ್.ಬಿ.ಎಸ್.ಆರಾಧ್ಯ, ಉದ್ಯಮಿ ಜೆ.ತೀರ್ಥ ಪ್ರಸಾದ್ ಇದ್ದರು.