ಬೆಂಗಳೂರು: ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಕೈಗಳು ಅಲ್ಲಿ ಸೈನಿಕರ ಕತ್ತಿ, ಓಬವ್ವರ ಒನಕೆ ಹಿಡಿದವು, ಚಿಟ್ಟೆಯಾಗಿ ಹಾರಿದವು. ಶಿಶುನಾಳ ಶರೀಫ, ಗಾಂಧೀಜಿ, ವಿವೇಕಾನಂದ, ರಾಮಕೃಷ್ಣ... ಹೀಗೆ ಹತ್ತಾರು ಮಹನಿಯರ ವೇಷ ತೊಟ್ಟ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಸ್ಪರ್ಶ ಟ್ರಸ್ಟ್ ಹೆಸರಘಟ್ಟದಲ್ಲಿ ಆಯೋಜಿಸಿದ್ದ ‘ನಿರ್ಗತಿಕ ಮಕ್ಕಳ ಪ್ರತಿಭೋತ್ಸವ’ದಲ್ಲಿ ಈ ನೋಟಗಳು ಕಂಡವು.
‘ನನ್ನ ಅಪ್ಪ–ಅಮ್ಮ ತಮಿಳುನಾಡಿನಲ್ಲಿ ಸತ್ತು ಹೋದ್ರು. ಯಾರೋ ನನ್ನನ್ನು ಬೆಂಗಳೂರಿಗೆ ತಂದು ಬಿಟ್ರು. ನಾನು ಭಿಕ್ಷೆ ಬೇಡುತ್ತಿದ್ದೆ. ಸ್ಪರ್ಶ ಅವರು ಕರೆದುಕೊಂಡು ಬಂದು ಶಾಲೆಗೆ ಕಳುಹಿಸುತ್ತಿದ್ದಾರೆ’ ಎಂದು ವಿದ್ಯಾರ್ಥಿನಿ ಗಾಯತ್ರಿ ಹೇಳಿದಳು.
ಪ್ರತಿಭೋತ್ಸವ ಉದ್ಘಾಟಿಸಿದ ಮಾಲ್ ಮಾರ್ಟ್ ಮುಖ್ಯಸ್ಥೆ ಸುನೀತಾ, ‘ಸ್ಪರ್ಶ ನೂರಾರು ಮಕ್ಕಳಿಗೆ ತಂದೆ–ತಾಯಿಯ ಪ್ರೀತಿ ಧಾರೆ ಎರೆದಿದೆ. ಬಾಡುತ್ತಿದ್ದ ಜೀವಗಳು ಇಲ್ಲಿ ಅರಳುತ್ತಿವೆ. ಅವರಿಗೆ ಸಂಸ್ಕಾರ ಕಲಿಸಿ, ಉತ್ತಮ ಪ್ರಜೆಯಾಗಿಸಲು ಶ್ರಮಿಸುತ್ತಿದೆ’ ಎಂದರು. ಸಂಸ್ಥೆಯ ಅಧ್ಯಕ್ಷ ಗೋಪಿನಾಥ್ ಮಾತನಾಡಿದರು.