ಆತ್ಮಹತ್ಯೆಗೆ ಯತ್ನ; ತಾಯಿ ಸಾವು, ಮಕ್ಕಳು ಅಸ್ವಸ್ಥ
ಬೆಂಗಳೂರು: ಶ್ರೀರಾಂಪುರ ಬಳಿಯ ಲಕ್ಷ್ಮಣನಗರದಲ್ಲಿ ಬುಧವಾರ ಒಂದೇ ಕುಟುಂಬದ ಮೂವರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ತೀವ್ರ ಅಸ್ವಸ್ಥಗೊಂಡಿದ್ದ ಶಾಂತಿ (44) ಎಂಬುವರು ಚಿಕಿತ್ಸೆಗೆ ಸ್ಪಂದಿಸದೇ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಶಾಂತಿ ಅವರ ಮಕ್ಕಳಾದ ಸಂತೋಷ್ (24) ಹಾಗೂ ರೂಪಾ (18) ಸಹ ಅಸ್ವಸ್ಥಗೊಂಡಿದ್ದು, ಅವರಿಬ್ಬರಿಗೆ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
‘ತಮಿಳುನಾಡಿನ ಕಣನ್ ಎಂಬುವರನ್ನು ಶಾಂತಿ ಮದುವೆ ಆಗಿದ್ದರು. ದಂಪತಿ, ತಮ್ಮಿಬ್ಬರು ಮಕ್ಕಳ ಜೊತೆ ಲಕ್ಷ್ಮಣ ನಗರದಲ್ಲಿ ನೆಲೆಸಿದ್ದರು. ಪತಿ ಕಣನ್, ಖಾಸಗಿ ಕಂಪನಿಯೊಂದರ ಕಾವಲುಗಾರ. ಶಾಂತಿ, ಮಲ್ಲೇಶ್ವರದ ಹಳ್ಳಿ ಮನೆ ಹೋಟೆಲ್ನಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದರು. ಮಗ ಸಂತೋಷ್, ಕೋರಮಂಗಲದ ದ್ವಿಚಕ್ರ ವಾಹನ ಶೋರೂಂನಲ್ಲಿ ಮೆಕ್ಯಾನಿಕ್ ಆಗಿದ್ದರು. ಮಗಳು ರೂಪಾ, ಪ್ರಥಮ ಪಿಯುಸಿ ಓದುತ್ತಿದ್ದರು’ ಎಂದು ಶ್ರೀರಾಮಪುರ ಪೊಲೀಸರು ಹೇಳಿದರು.
‘ಕಣನ್ ಅವರು ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆಗೆ ವಾಪಸ್ ಬಂದಾಗ, ಪತ್ನಿ ಮತ್ತು ಮಕ್ಕಳು ಅಸ್ವಸ್ಥರಾಗಿ ಬಿದ್ದಿದ್ದರು. ಗಾಬರಿಗೊಂಡ ಅವರು ಸ್ಥಳೀಯ ನಿವಾಸಿಗಳ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ದಿದ್ದರು’ ಎಂದರು ಹೇಳಿದರು.
‘ಮೂವರೂ ವಿಷ ಕುಡಿದು ಆತ್ಮಹತ್ಯೆ ಯತ್ನಿಸಿದ್ದರು ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಆದರೆ, ಆತ್ಮಹತ್ಯೆಗೆ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಮನೆಯಲ್ಲಿ ಯಾವುದೇ ಮರಣ ಪತ್ರವೂ ಸಿಕ್ಕಿಲ್ಲ’ ಎಂದು ಪೊಲೀಸರು ತಿಳಿಸಿದರು.
ಬರಹ ಇಷ್ಟವಾಯಿತೆ?
1
0
0
0
0
0 comments
View All