ಬೆಂಗಳೂರು: ‘ಸಂಸ್ಕೃತ ಸಾಹಿತ್ಯದ ವಿಸ್ತಾರ ಲ್ಯಾಟಿನ್ ಹಾಗೂ ಗ್ರೀಕ್ ಭಾಷೆಗಳ ಎರಡು ಪಟ್ಟು ಪುಸ್ತಕಗಳಿಗೆ ಸಮ’ ಎಂದು ಲೇಖಕಿ ಸುಧಾಮೂರ್ತಿ ಅಭಿಪ್ರಾಯಪಟ್ಟರು.
ಸಂಸ್ಕೃತ ಭಾರತಿ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಲೇಖಕ ಶತಾವಧಾನಿ ರಾ.ಗಣೇಶ್ ಅವರು ಅನುವಾದಿಸಿದ ‘ಮಹಾ ಬ್ರಾಹ್ಮಣ’ ಸಂಸ್ಕೃತ ಕೃತಿಯನ್ನುಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
‘ಎಲ್ಲ ಭಾಷೆಗಳಲ್ಲಿ ವಿಸ್ತೃತವಾಗಿ ಸಾಹಿತ್ಯ ಬೆಳೆಯಲು ಮೂಲ ಬೇರು ಸಂಸ್ಕೃತ ಸಾಹಿತ್ಯ. ಸಂಸ್ಕೃತ ಭಾಷೆ ಶ್ವಾಸವನ್ನು ಶುದ್ಧೀಕರಿಸುವ ಭಾಷೆ’ ಎಂದರು.
‘ನನಗೆ ಸಂಸ್ಕೃತ ಭಾಷೆ ಬರುವುದಿಲ್ಲ. ಚಿಕ್ಕಂದಿನಲ್ಲಿ ತಾತ ಹೇಳಿದ ಕಥೆಗಳ ಮೂಲಕ ಕಾಳಿದಾಸನ ಸಾಹಿತ್ಯವನ್ನು ಕುರಿತು ತಿಳಿದುಕೊಂಡೆ. ಆದರೆ ಇಂದು ಕಥೆ ಹೇಳುವ ಸಂಸ್ಕೃತಿ ಇಲ್ಲ. ಮಕ್ಕಳಿಗೆ ಕಾಳಿದಾಸ ಯಾರು ಎಂದು ಕೇಳಿದರೆ, ಗೂಗಲ್ ಮಾಡಿ ಎನ್ನುತ್ತವೆ. ನಿಮ್ಮಮಕ್ಕಳಿಗೆ ಸಂಸ್ಕೃತಿ ಕಲಿಸಿ’ ಎಂದರು.
‘ನಮ್ಮತನ ಹಾಗೂ ನಮ್ಮಸಂಸ್ಕೃತಿಯ ವಿಸ್ಮೃತಿಯಾಗುತ್ತಿರುವ ಈ ಸಂದರ್ಭದಲ್ಲಿ ಸಂಸ್ಕೃತವನ್ನು ಕಲಿಸುವ ಮೂಲಕ ಕಾಳಿದಾಸ ಹಾಗೂ ಇತರೆ ಕವಿಗಳನ್ನು ಮಕ್ಕಳಿಗೆ ತಲುಪಿಸಬೇಕಾದ ಅಗತ್ಯವಿದೆ. ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ಚಿಕ್ಕ ಪ್ರಮಾಣದಲ್ಲಿ ಈ ಕೆಲಸ ಆಗಬೇಕು’ ಎಂದು ಅಭಿಪ್ರಾಯಪಟ್ಟರು.
‘ಸಂಸ್ಕೃತ ಭಾಷೆಯ ಬೆಳವಣಿಗೆಗೆ ಶ್ರಮಿಸಬೇಕಾದ ಅಗತ್ಯವಿದೆ. ಅದಕ್ಕಾಗಿ ಅದರ ಬೆಳವಣಿಗೆಗೆ ನಮ್ಮಪ್ರತಿಷ್ಠಾನದ ವತಿಯಿಂದ ₹10 ಲಕ್ಷ ನೀಡಲಾಗುವುದು’ ಎಂದು ಹೇಳಿದರು.