ಬೆಂಗಳೂರು: ಯಶವಂತಪುರ ಸಮೀಪದ ಸುಬೇದಾರ್ ಪಾಳ್ಯದಲ್ಲಿ ಆಟೊ ಚಾಲಕ ವೆಂಕಟೇಶ್ (38) ಎಂಬುವರು ತಮ್ಮ ಗೆಳತಿ ಎದುರೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಯುವ ಮುನ್ನ ಮೊಬೈಲ್ನಲ್ಲಿ ಸೆಲ್ಫಿ ವಿಡಿಯೊ ಮಾಡಿರುವ ಅವರು, ‘ನನ್ನ ಸಾವಿಗೆ ಯಾರೂ ಕಾರಣರಲ್ಲ. ಗೆಳತಿ ಬಳಿ ₹ 40 ಸಾವಿರ ಸಾಲ ಮಾಡಿದ್ದೇನೆ. ನನ್ನ ಆಟೊ ಮಾರಾಟ ಮಾಡಿ ಆಕೆಗೆ ಹಣ ಕೊಡಿ. ಮುಂದಿನ ಜನ್ಮದಲ್ಲಿ ಈ ಗೆಳತಿಯೇ ನನ್ನ ಹೆಂಡತಿಯಾಗಲಿ’ ಎಂದು ಹೇಳಿ ನೇಣು ಹಾಕಿಕೊಂಡಿದ್ದಾರೆ.
ಸುಬೇದಾರ್ಪಾಳ್ಯ ನಿವಾಸಿಯಾದ ವೆಂಕಟೇಶ್, ಗುರುವಾರ ರಾತ್ರಿ ಅದೇ ರಸ್ತೆಯ ಗೆಳತಿ ಮನೆಗೆ ತೆರಳಿದ್ದರು. ಹಣಕಾಸಿನ ವಿಚಾರವಾಗಿ ರಾತ್ರಿ ಅವರೊಂದಿಗೆ ಜಗಳ ಮಾಡಿಕೊಂಡ ವೆಂಕಟೇಶ್, 4.30ರ ಸುಮಾರಿಗೆ ಗೆಳತಿಯನ್ನು ಮನೆಯಿಂದ ಹೊರಹಾಕಿ ಬಾಗಿಲು ಹಾಕಿಕೊಂಡಿದ್ದಾರೆ.
ವೆಂಕಟೇಶ್ ನೇಣು ಹಾಕಿಕೊಳ್ಳುತ್ತಿರುವುದನ್ನು ಕಂಡ ಗೆಳತಿ, ‘ಆತ್ಮಹತ್ಯೆ ಮಾಡಿಕೊಳ್ಳುವುದಾದರೆ ನಿನ್ನ ಮನೆಗೆ ಹೋಗು. ನನ್ನ ಮನೆಯಲ್ಲಿ ಸಾಯಬೇಡ. ಸಣ್ಣಪುಟ್ಟ ವಿಷಯಕ್ಕೆ ಕೋಪ ಮಾಡಿಕೊಳ್ಳುತ್ತೀಯಾ. ದುಡುಕಿ ಇಂತಹ ನಿರ್ಧಾರ ತೆಗೆದುಕೊಳ್ಳಬೇಡ’ ಎಂದು ಅಂಗಲಾಚಿದ್ದಾರೆ. ಆ ಮಾತನ್ನು ಕೇಳದೆ ವೆಂಕಟೇಶ್ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.