ಹುಬ್ಬಳ್ಳಿ: ರಥ ಸಪ್ತಮಿ ಅಂಗವಾಗಿ ಸಿದ್ಧಾರೂಢ ಮಠ ಮಠದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮೂಹಿಕ ಸೂರ್ಯ ಸಮನಸ್ಕಾರ ಕಾರ್ಯಕ್ರಮದಲ್ಲಿ ಭಕ್ತರು – ಆಸಕ್ತರು ಪಾಲ್ಗೊಂಡರು. ಸತತ ಒಂದು ಗಂಟೆಗಳ ಕಾಲ ಸೂರ್ಯ ನಮಸ್ಕಾರ ಮಾಡುವ ಮೂಲಕ ನೇಸರನ ಸ್ಮರಣೆ ಮಾಡಿ ಗೌರವ ಸಲ್ಲಿಸಿದರು. ಶ್ರೀಆರೂಢ ಯೋಗ ಕೇಂದ್ರದ ಪಂಚಲಿಂಗಪ್ಪ ಜಂಬಣ್ಣ ಕವಲೂರ ಮಾರ್ಗದರ್ಶನ ನೀಡಿದರು.
‘ರಥ ಸಪ್ತಮಿ ಅಂಗವಾಗಿ ಭಕ್ತರಿಗಾಗಿ ಸಾಮೂಹಿಕ ಸೂರ್ಯ ನಮಸ್ಕಾರ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಇದರಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ಒಂದು ಸೂರ್ಯ ನಮಸ್ಕಾರ 12 ಆಸನಗಳನ್ನು ಒಳಗೊಂಡಿರುವುದರಿಂದ ದೇಹಕ್ಕೆ ವ್ಯಾಯಾಮ ಆಗುತ್ತದೆ ಹಾಗೂ ಮನಸ್ಸಿಗೂ ನೆಮ್ಮದಿ ಸಿಗುತ್ತದೆ’ ಎಂದು ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಡಿ.ಡಿ. ಮಾಳಗಿ ಹೇಳಿದರು.
‘ಮಠದ ಯಾತ್ರಿ ನಿವಾಸದಲ್ಲಿಯೂ ಪ್ರತಿ ದಿನ ಯೋಗ ತರಗತಿ ನಡೆಯುತ್ತಿದ್ದು, ಭಕ್ತರು ಭಾಗವಹಿಸುತ್ತಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು. ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿಯ ಗೌರವ ಕಾರ್ಯದರ್ಶಿ ಸಿದ್ಧರಾಮ ಕೋಳೆಕರ, ಧರ್ಮದರ್ಶಿ ನಾರಾಯಣ ಪ್ರಸಾದ್ ಪಾಠಕ್ ಇದ್ದರು.