ಬೆಂಗಳೂರು:ಕೆಂಗೇರಿ, ಬಂಡೇಮಠ, ಕೆ.ಎಚ್.ಬಿ.ಬಡಾವಣೆಯಲ್ಲಿ ತಿಂಗಳ ಹಿಂದಷ್ಟೇ ರಸ್ತೆಗಳಿಗೆ ಹಾಕಲಾಗಿದ್ದ ಡಾಂಬರ್ ಕಾಮಗಾರಿ ಕಳಪೆಯಾಗಿದ್ದು, ಬಹುತೇಕ ಕಡೆ ಡಾಂಬರ್ ಕಿತ್ತು ಬರುತ್ತಿದೆ. ಇದೀಗ ರಸ್ತೆಗಳಿಗೆ ತೇಪೆ ಹಾಕಲಾಗುತ್ತಿದೆ.
ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದಸ್ಥಳೀಯರು ಇತ್ತೀಚೆಗೆ ರಾಜ್ಯ ಗೃಹ ಮಂಡಳಿಗೆ ದೂರು ನೀಡಿದ್ದರು.
‘ತೆರಿಗೆದಾರರ ಕೋಟ್ಯಂತರ ರೂಪಾಯಿ ಹಣವನ್ನು ಹೀಗೆ ವ್ಯರ್ಥ ಮಾಡುವುದು ಸರಿಯಲ್ಲ.ಬಡಾವಣೆ ನಿರ್ಮಾಣವಾಗಿ ಒಂದೂವರೆ ದಶಕವೇ ಕಳೆಯುತ್ತಿದ್ದರೂ, ಒಂದು ಉದ್ಯಾನವೂ ಅಭಿವೃದ್ಧಿಯಾಗಿಲ್ಲ. ಬೀದಿ ದೀಪಗಳ ಸೌಲಭ್ಯವೂ ಸಮರ್ಪಕವಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಗೃಹ ಮಂಡಳಿಯ ಬಡಾವಣೆಗಳ ಸ್ಥಿತಿ, ರೆವಿನ್ಯೂ ಬಡಾವಣೆಗಿಂತಲೂ ಶೋಚನೀಯವಾಗಿದೆ. ಈ ನಿಟ್ಟಿನಲ್ಲಿ ಕೆಎಚ್ಬಿ ಬಡಾವಣೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಬೇಕೆಂದು’ ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಬಡಾವಣೆಯಲ್ಲಿ 2 ವರ್ಷಗಳ ಹಿಂದೆ, ನೀರಿನ ಮುಖ್ಯ ಕೊಳವೆ ಹಾಗೂ ಒಳಚರಂಡಿ ಕೊಳವೆ ಅಳವಡಿಸಲು ಅಗೆದ ರಸ್ತೆಗಳಲ್ಲಿ ಸಾಕಷ್ಟು ಗುಂಡಿ ಬಿದ್ದಿದ್ದವು. ಓಡಾಡಲೂ ಆಗದಷ್ಟು ಹದಗೆಟ್ಟ ದಾರಿಗಳಲ್ಲಿ ನಾಗರಿಕರು ಪರದಾಡುವಂತಾಗಿತ್ತು.
ಸತತ ಹೋರಾಟದ ನಂತರ ಕಳೆದ ತಿಂಗಳಷ್ಟೇ ರಸ್ತೆಗಳಿಗೆ ಟಾರು ಹಾಕಲಾಗಿತ್ತು.