ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಕೈಬಿಟ್ಟಿದೆ.
ತೇಜಸ್ವಿ ಸೂರ್ಯ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ ಬೆನ್ನಲ್ಲೇ, ಅವರ ನಡತೆ ಪ್ರಶ್ನಿಸಿ ಯುವತಿಯೊಬ್ಬಳು ಟ್ವೀಟ್ ಮಾಡಿದ್ದರು. ಇದು ‘ಮೀ–ಟೂ’ ಪ್ರಕರಣ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿತ್ತು.
ತೇಜಸ್ವಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕೆಪಿಸಿಸಿ ಮಹಿಳಾ ಘಟಕದ ಸದಸ್ಯರು ಆಯೋಗಕ್ಕೆ ದೂರು ನೀಡಿದ್ದರು. ವಿಚಾರಣೆಗೆ ಹಾಜರಾಗುವಂತೆ ತೇಜಸ್ವಿ ಅವರಿಗೆ ಆಯೋಗ ನೋಟಿಸ್ ನೀಡಿತ್ತು.
‘ತೇಜಸ್ವಿ ವಿರುದ್ಧ ನಾನು ಯಾವುದೇ ಆರೋಪ ಮಾಡಿಲ್ಲ. ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಕಾಂಗ್ರೆಸ್ನ ಮುಖಂಡರು ರಾಜಕೀಯ ದುರುದ್ದೇಶದಿಂದ ಹಾಗೂ ಬಿಜೆಪಿ ಅಭ್ಯರ್ಥಿಯ ರಾಜಕೀಯ ಭವಿಷ್ಯ ಹಾಳು ಮಾಡಲು ಈ ದೂರು ನೀಡಿದ್ದಾರೆ. ಈ ದೂರನ್ನು ವಜಾ ಮಾಡಬೇಕು’ ಎಂದು ಯುವತಿಯು ಆಯೋಗಕ್ಕೆ ಇ–ಮೇಲ್ ಮಾಡಿದ್ದರು.