ಬೆಂಗಳೂರು: ಲಿಫ್ಟ್ ದುರಸ್ತಿ ಮಾಡಲು ಕಟ್ಟಡದ ಐದನೇ ಮಹಡಿಗೆ ತೆರಳಿದ ಭದ್ರತಾ ಸಿಬ್ಬಂದಿ, ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಕಗ್ಗದಾಸಪುರದ ಅಬ್ಬಯ್ಯರೆಡ್ಡಿ ಲೇಔಟ್ನಲ್ಲಿ ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ.
ಯುವರಾಜ್ ಆಚಾರ್ಯ (20) ಮೃತರು. ಕೆಎಂಆರ್ ನೆಸ್ಟ್ ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿ ಈ ಘಟನೆ ನಡೆದಿದೆ. ಟೆರೇಸ್ ಮೇಲೆ ಹೋಗಿ ಲಿಫ್ಟ್ನ ಬಾಗಿಲು ತೆರೆಯುತ್ತಿದ್ದಂತೆ ಪಕ್ಕದ ಓಣಿಗೆ ಯುವರಾಜ್ ಬಿದ್ದಿದ್ದಾರೆ. ಈ ಓಣಿ ತೆಳುವಾದ ಪ್ಲಾಸ್ಟಿಕ್ ಶೀಟ್ ಅಳವಡಿಸಲಾಗಿತ್ತು.
ಯುವರಾಜ್ ಬೀಳುತ್ತಿದ್ದಂತೆ ಪ್ಲಾಸ್ಟಿಕ್ ಶೀಟ್ ಕೂಡಾ ತುಂಡಾಗಿದೆ. ಶೀಟ್ ಜೊತೆಗೆ ಯುವರಾಜ್ ಸುಮಾರು 55 ಅಡಿ ಕೆಳಗಿದ್ದ ಮೊದಲ ಮಹಡಿಯ ನೆಲದ ಮೇಲೆ ಬಿದ್ದಿದ್ದರು.
ಪ್ಯಾಸೇಜ್ಗೆ ಕಬ್ಬಿಣದ ಗ್ರಿಲ್ ಅಳವಡಿಸದೆ ನಿರ್ಲಕ್ಷ್ಯ ವಹಿಸಿದ ಆರೋಪದಲ್ಲಿ ಕಟ್ಟಡದ ಮಾಲೀಕ ನಾಗರಾಜ ರೆಡ್ಡಿ ವಿರುದ್ಧ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.