ಬೆಂಗಳೂರು:‘ನಿನ್ನೆಯನ್ನು ಮರೆತವರು ಇಂದು ಬಾಳಲಾರರು, ಮುಂದೆ ಬೆಳೆಯಲಾರರು. ನಿನ್ನೆ ಎಂಬುದು ನಮಗೆ ಹೆಮ್ಮೆ, ಸ್ಫೂರ್ತಿ. ಕನ್ನಡಿಗರಾಗಿ ಇರಲು ಮತ್ತು ಭಾರತೀಯರು ಎನಿಸಿಕೊಳ್ಳಲು ಹೆಮ್ಮೆಪಡಬೇಕು’ ಎಂದು ಸಾಹಿತಿ ಎಂ.ಚಿದಾನಂದಮೂರ್ತಿ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕನ್ನಡ ಸಂಘ ಗುರುವಾರ ಆಯೋಜಿಸಿದ್ದ 63ನೇ ಕನ್ನಡ ರಾಜ್ಯೋತ್ಸವ, ಸಾಂಸ್ಕೃತಿಕ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸಾಹಿತ್ಯ ಕ್ಷೇತ್ರದಲ್ಲಿ ಮೊದಲು ಸಾಧನೆ ಮಾಡಿದವರು ಮಹಿಳೆಯರು. ಸೂಳೆ ಸಂಕವ್ವ ವಚನ ರಚನೆ ಮಾಡುವ ಮೂಲಕ ಸಾಹಿತ್ಯ ಕೃಷಿಗೆ ನಾಂದಿ ಹಾಡಿದವರು. ಅಂಥವರನ್ನು ಮರೆಯಬಾರದು’ ಎಂದರು.
ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ‘ಚಿದಾನಂದಮೂರ್ತಿ ಅವರು ಕನ್ನಡ ಸಂಸ್ಕೃತಿ, ಸಾಹಿತ್ಯದ ಸಂಶೋಧನೆ ಮೂಲಕ ಕನ್ನಡ ನಾಡಿಗೆನೀಡಿರುವ ಕೊಡುಗೆ ಅಪಾರ. ಅವರ ಕನ್ನಡದ ಬಗೆಗಿನ ನಿಷ್ಠೆ, ಪ್ರಾಮಾಣಿಕತೆ ಮತ್ತು ಕ್ರೀಯಾಶೀಲತೆಗಳು ಆದರ್ಶ ಪ್ರಾಯವಾಗಿವೆ’ ಎಂದು ಹೇಳಿದರು.
ಸಂಘದಅಧ್ಯಕ್ಷ ಕೆ.ವಿ.ಶಿವ ಕುಮಾರ್, ‘ಚಿದಾನಂದಮೂರ್ತಿ ಅವರ ಕನ್ನಡ ಸಂಸ್ಕೃತಿಯ ಹಿರಿಮೆ– ಗರಿಮೆ ಕೃತಿಯನ್ನು ನಮ್ಮ ಸಂಘದಿಂದ ಮುದ್ರಿಸಿ ಹಂಚುತ್ತಿದ್ದೇವೆ’ ಎಂದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ ಬೆಳ್ಳಿ ಪದಕ ಪಡೆದ ರೋಷನ್ ಪೇರಾವೋ, ಡಿ.ಚೇತನ್, ವಿಶ್ವೇಶ್ವರ ಉಡುಪ, ಕೆ.ರಾಮಚಂದ್ರರೆಡ್ಡಿ ಅವರನ್ನು ಗೌರವಿಸಲಾಯಿತು.