ಬೆಂಗಳೂರು: ಮರದ ಕೊಂಬೆ ತಲೆಯ ಮೇಲೆ ಬಿದ್ದು ಉದ್ಯಮಿ ಸಾವಿಗೀಡಾದ ಘಟನೆ ಜಯನಗರದ ನಾಲ್ಕನೇ ಹಂತದಲ್ಲಿರುವ ಸಾಯಿಬಾಬಾ ದೇವಸ್ಥಾನದ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ.
ಬನಶಂಕರಿ ನಿವಾಸಿ ಮುರುಗನ್ (52) ಮೃತ ವ್ಯಕ್ತಿ. ಹೊಸೂರು ರಸ್ತೆಯಲ್ಲಿರುವ ಖಾಸಗಿ ಕಾಲೇಜಿಗೆ ಬೆಳಿಗ್ಗೆ 8.30ರ ಸುಮಾರಿಗೆ ಮಗನನ್ನು ಬಿಟ್ಟು ದೇವಸ್ಥಾನಕ್ಕೆ ಬಂದ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದರು.
ದೇವಸ್ಥಾನದ ಬಳಿ ತಮ್ಮ ಕಾರು ನಿಲ್ಲಿಸಿ, ದೇವಸ್ಥಾನಕ್ಕೆ ತೆರಳಿ ಮತ್ತೆ ಕಾರಿನ ಬಳಿ ಹೋಗುತ್ತಿರುವ ವೇಳೆ ಮರದ ಕೊಂಬೆ ಅವರ ತಲೆ ಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ನಿಮಾನ್ಸ್ ಆಸ್ಪತ್ರೆಗೆ ಕೊಂಡೊಯ್ದರೂ ಫಲಕಾರಿ ಆಗಲಿಲ್ಲ.
ತಿಲಕನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.