ಬೆಂಗಳೂರು: ಕಲೆ ಮತ್ತು ವಿಜ್ಞಾನ ಒಂದಕ್ಕೊಂದು ಪೂರಕವೇ ಹೊರತು ಯಾವುದೂ ಮೇಲೂ ಅಲ್ಲ, ಕೀಳೂ ಅಲ್ಲ ಎಂದು ನೊಬೆಲ್ ಪುರಸ್ಕೃತ ವಿಜ್ಞಾನಿ ಡಾ.ವೆಂಕಿ ರಾಮಕೃಷ್ಣನ್ ಹೇಳಿದರು.
ಸಂತ ಜೋಸೆಫರ ಕಾಲೇಜಿನ ರಸಾಯನ ವಿಜ್ಞಾನ ವಿಭಾಗದಲ್ಲಿ ‘ನಮ್ಮ ಜೀನ್ಗಳನ್ನು ಓದುವ ಯಂತ್ರ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ‘ಕೆಲ ವರು ಕಲೆಯಲ್ಲಿ ಪ್ರತಿಭಾವಂತರಾಗಿದ್ದರೆ, ಇನ್ನೂ ಕೆಲವರು ವಿಜ್ಞಾನ, ಸಂಗೀತ ಮತ್ತಿತರ ವಿಷಯಗಳಲ್ಲಿ ಪರಿಣಿತರಿರುತ್ತಾರೆ. ಪ್ರತಿಯೊಬ್ಬರೂ ಮುಖ್ಯ’ ಎಂದು ಹೇಳಿದರು.
‘ಒಹಿಯೊ ವಿಶ್ವವಿದ್ಯಾಲಯದಲ್ಲಿ ಭೌತ ವಿಜ್ಞಾನದಲ್ಲಿ ಪಿಎಚ್ಡಿ ಮಾಡಿದರೂ, ನಾನು ಆಯ್ಕೆ ಮಾಡಿಕೊಂಡಿದ್ದು ಜೀವ ವಿಜ್ಞಾನ ಕ್ಷೇತ್ರವನ್ನು. ಭೌತ ವಿಜ್ಞಾನದಲ್ಲಿ ಮುಂದುವರಿಯುವುದರಿಂದ ವಿಜ್ಞಾನ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಲು ಆಗುವುದಿಲ್ಲ ಎಂದು ಅನಿಸಿದ್ದರಿಂದ, ಜೀವ ವಿಜ್ಞಾನ ಕ್ಷೇತ್ರಕ್ಕೆ ಕಾಲಿಟ್ಟೆ. ಜೀವ ವಿಜ್ಞಾನ ಉತ್ತಮ ಭವಿಷ್ಯವನ್ನು ಹೊಂದಿರುವ ಕ್ಷೇತ್ರವಾಗಿತ್ತು. ಹೀಗಾಗಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಜೀವ ವಿಜ್ಞಾನ ಪದವಿ ಪಡೆದೆ. ಯಾಲೆ ವಿಶ್ವವಿದ್ಯಾಲಯದಲ್ಲಿ ರೈಬೊಸೋಮ್ಗಳ ಬಗ್ಗೆ ಸಂಶೋಧನೆ ನಡೆಸಿದೆ’ ಎಂದು ಅವರು ತಿಳಿಸಿದರು.
‘ಪುರಸ್ಕಾರ, ಬಹುಮಾನಗಳನ್ನು ಗಮನದಲ್ಲಿಟ್ಟುಕೊಂಡು ಓದು ಅಥವಾ ಕಲಿಕೆ ಮಾಡಬಾರದು. ಕುತೂಹಲ ಮತ್ತು ಹೊಸ ವಿಷಯ ಕಲಿಯುವ ಉತ್ಸಾಹದಿಂದ ಅಧ್ಯಯನ ಮಾಡಬೇಕು’ ಎಂದರು.